ನವದೆಹಲಿ prajakiran. com :
ಸುಪ್ರೀಂ ಕೋರ್ಟ್ ನ ಹಾಲಿ ಹಿರಿಯ ನ್ಯಾಯಮೂರ್ತಿ ಹಾಗೂ ಕನ್ನಡಿಗ ಮೋಹನ್ ಎಂ. ಶಾಂತನಗೌಡರ್ (61) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಅವರು ಕಳೆದ ಹಲವು ವರ್ಷಗಳಿಂದ
ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಹೀಗಾಗಿ ಅವರನ್ನು ಗುರುಗ್ರಾಮದ ಮೇದಾಂತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ವಿಧಿವಶರಾದರು ಎಂದು ಸುಪ್ರೀಂ ಕೋರ್ಟ್ ಅಸಿಸ್ಟೆಂಟ್ ರಿಜಿಸ್ಟರ್ ಗಗನ್ ಸೋನಿ ತಿಳಿಸಿದ್ದಾರೆ.
ಮೋಹನ್ ಶಾಂತನಗೌಡರ ಅವರು ಮೂಲತಃ ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದವರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದ ಅವರು 1980ರಲ್ಲಿ ಧಾರವಾಡದಿಂದ ವಕೀಲ ವೃತ್ತಿ ಆರಂಭಿಸಿದ್ದರು.
2003ರಲ್ಲಿ ರಾಜ್ಯ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2004ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.
ಆ ಬಳಿಕ 2016ರಲ್ಲಿ ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದ ಅವರು 2017ರಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ಧಾರವಾಡದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮೋಹನ್ ಶಾಂತನಗೌಡರ ಅವರ ಅಗಲಿಕೆ ಅಪಾರ ನೋವುಂಟು ಮಾಡಿದೆ ಎಂದು ಅವರ ಗೆಳೆಯರು, ಅಭಿಮಾನಿಗಳು, ರಾಜ್ಯದ ವಕೀಲರ ಸಂಘ ತೀವ್ರ ಸಂತಾಪ ಸೂಚಿಸಿದೆ.
.