ತಂದೆ-ತಾಯಿಗೆ ಸನ್ಮಾನ
ಗದಗ prajakiran.com : ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧನಿಗೆ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಯೋಧ ಪ್ರಕಾಶ್ ಮಹೇಶ್ವರಪ್ಪ ಕೋರಿ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿ ಸುರಕ್ಷಿತವಾಗಿ ಹುಟ್ಟೂರಿಗೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮದ ಗುರು ಹಿರಿಯರು, ಗೆಳೆಯರ ಬಳಗದಿಂದ ಗ್ರಾಮಸ್ಥರು ಸೇರಿ ಅದ್ದೂರಿ ಸ್ವಾಗತ ಕೋರಿದರು.
ಮಹಿಳೆಯರು ಆರತಿ ಬೆಳಗಿ, ಹೂವಿನ ಹಾರ, ತುರಾಯಿ ಹಾಕಿ, ಸಿಹಿ ತಿನಿಸಿ, ರಾಷ್ಟ್ರ ಧ್ವಜ ಹಿಡಿದು ಆತ್ಮೀಯವಾಗಿ ಬರ ಮಾಡಿಕೊಂಡರು.
ಅಕ್ಕಮಹಾದೇವಿ ಮತ್ತು ನಿವೃತ್ತ ಪ್ರಾಂಶುಪಾಲ ಮಹೇಶ್ವರಪ್ಪ ಕೋರಿ ದಂಪತಿಯ ಪುತ್ರ ಯೋಧ ಪ್ರಕಾಶ್ ಅವರು ಜಮ್ಮು ಕಾಶ್ಮೀರದಲ್ಲಿ 2 ಬಾರಿ 6 ವರ್ಷ, ಸಿಕ್ಕಿಂ, ಅಮೃತಸರ, ಅಸ್ಸಾಂ, ಉತ್ತರ ಪ್ರದೇಶ ಇನ್ನಿತರ ಪ್ರದೇಶದಲ್ಲಿ ಸತತ 17 ವರ್ಷ ಸೇವೆ ಸಲ್ಲಿಸಿದ ಬಳಿಕ ಈಗ ನಿವೃತ್ತಿ ಹೊಂದಿ ತವರಿಗೆ ವಾಪಸಾಗಿದ್ದಾರೆ.
ಈ ಸಂದರ್ಭದಲ್ಲಿ ಯೋಧನ ತಂದೆ-ತಾಯಿಯನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಮಹೇಶ್ವರಪ್ಪ ಕೋರಿ, ದೇಶಾಭಿಮಾನ, ರಾಷ್ಟ್ರಾಭಿಮಾನದ ಸಂಕೇತವಾಗಿ ಗ್ರಾಮಸ್ಥರು, ನನ್ನ ಸ್ನೇಹಿತರು ಸೇವೆಯನ್ನು ಗುರುತಿಸಿ ಅಭಿನಂದಿಸಿದ್ದಾರೆ.
ಅವರ ಪ್ರೀತಿ ಪ್ರೇಮ ಅಭಿಮಾನಗಳ ಮಧ್ಯೆ ನಾನು 17 ವರ್ಷಗಳ ಸೇವೆಯಲ್ಲಿ ಅನುಭವಿಸಿದ ನೋವು ಸಂಕಷ್ಟ, ಎದುರಿಸಿದ ಸವಾಲುಗಳು ಒಂಟಿತನ ಎಲ್ಲವೂ ನೀರಾಗಿ ಕರಗಿದವು ಎಂದರು.
ವರದಿ – ಮಂಜುನಾಥ ಎಸ್.ರಾಠೋಡ ಗದಗ