ಬೆಳಗಾವಿ prajakiran.com : ಲಾಕಡೌನ್ ಸಂಕಷ್ಟಕ್ಕೆ ಸಿಲುಕಿ ನರಳಿದ ನೇಕಾರ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ವಡಗಾವಿ ಲಕ್ಷ್ಮೀ ನಾಗರ ನಿವಾಸಿ ಸುಜೀತ ಉಪರಿ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಜೀತ ಇದಕ್ಕೂ ಮುನ್ನ ಹೆಂಡ್ತಿ ಮಕ್ಕಳನ್ನ ತವರು ಮನೆಗೆ ಕಳುಹಿಸಿದ್ದ ಎಂದು ಗೊತ್ತಾಗಿದೆ.
ಕಳೆದ ವರ್ಷ ಪ್ರವಾಹದಿಂದ ಬಳಲಿದ್ದು, ಆ ಕಹಿ ಘಟನೆ ಮರೆಯುವ ಮುನ್ನವೇ ಈ ವರ್ಷ ಲಾಕಡೌನ್ ಸಂಕಷ್ಟ ದಿಂದ ತತ್ತರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದಲ್ಲದೆ, ಆತ ಮೈತುಂಬ ಸಾಲಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಸಾಲದಿಂದ ತತ್ತರಿಸಿದ್ದ ಸುಜೀತ ಕುಡಿತದ ಚಟಕ್ಕೆ ದಾಸನಾಗಿದ್ದ.
ಕಳೆದ ತಿಂಗಳು ಮೇ 26 ರಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆ ಮೃತದೇಹದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.