ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಗುರುವಾರ ಸಂಜೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದೆ.
ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಾಡಹಗಲೇ ಇಬ್ಬರಿಗೆ ಚೂರಿ ಇರಿದು ಆರೋಪಿಗಳು ಪರಾರಿಯಾದ ಘಟನೆ ನಡೆದಿದೆ.
ಇದರಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಮೊರ್ಚೆ ಹೋಗಿದ್ದರೆ, ಇನ್ನೊಬ್ಬರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಚಾಕು ಇರಿತ ಮಾಹಿತಿ ತಿಳಿದು ಧಾರವಾಡದ ಸಪ್ತಾಪುರ ಸರರ್ಕಲ್ ನಲ್ಲಿ ಕೆಲ ಕಾಲ ಜನತೆ ಆತಂಕಗೊಂಡಿದ್ದು, ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎತ್ತಿನಗುಡ್ಡದ ಉದಯ ನಾಗರಾಜ ಕೆಲಗೇರಿ ಹಾಗೂ ಇನ್ನೊಬ್ಬನಿಗೆ ಚಾಕು ಹಾಗೂ ಬೀರ ಬಾಟಲಿ ಯಿಂದ ಹೊಡೆದಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಬೆಳಗ್ಗೆ ಕ್ರಿಕೆಟ್ ಆಡುವಾಗ ಮದಾರಮಡ್ಡಿ ಮೈದಾನದ ಬಳಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು.
ಸಂಜೆ ಉದಯ ಕೆಲಗೇರಿಗೆ ಮೊಬೈಲ್ ಕರೆ ಮಾಡಿ ಸುರೇಶ ಅವರಾದಿ, ಮನೋಜ ಜಮನಾಳ ಇವರು ಮಾತನಾಡಿ ಸಪ್ತಾಪುರ ಸರ್ಕಲ್ ಗೆ ಕರೆದು ಜಗಳ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ ಅಲ್ಲಿ ನಡೆದಿದ್ದು ಮಾರಣಾಂತಿಕ ಹಲ್ಲೆ ಎಂದು ದೂರಲಾಗಿದೆ.
ಹಲ್ಲೆ ಮಾಡಿದವರನ್ನು ನಾಗರಾಜ ಹೊಂಗಣ್ಣವರ, ಆದರ್ಶ ನಾಯಕ, ವಿರೇಶ ಸೊಟ್ಟನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್ ಸಂಗಮೇಶ ಕಮಾಟಿ ಹಾಗೂ ವಿನಾಯಕ ಕಲಬುರಗಿ ಸೇರಿಕೊಂಡು ಈ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಹಿನ್ನಲೆಯಲ್ಲಿ ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ, 147, 148, 323, 324, 307, 504, 506, ದಾಖಲಾಗಿದ್ದು ತನಿಖೆ ಮುಂದುವರೆದಿದೆ.