ಹಾಸನ prajakiran.com : ಕಳೆದ ಎರಡು ದಿನಗಳಲ್ಲಿ ನಡೆದ ಎರಡು ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಬೇಕಾಗಿದ್ದ ಪಿಎಸ್ ಐ ಒಬ್ಬರು ಕೆಲಸದ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣದ ಟೌನ್ ಸಬ್ ಇನ್ಸಪೆಕ್ಟರ್ ಕಿರಣ್ ಕುಮಾರ್ ಅವರೇ ಆತ್ಮ ಹತ್ಯೆ ಮಾಡಿ ಕೊಂಡು ನತದೃಷ್ಟಅಧಿಕಾರಿಯಾಗಿದ್ದಾರೆ.
ದಕ್ಷತೆಗೆ ಹೆಸರಾಗಿದ್ದ ಇವರು ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವರು.
ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದ್ದರಿಂದ ಇವರ ಪತ್ನಿ ತಮ್ಮ ತಂದೆ ಮನೆಗೆ ಹೋಗಿದ್ದರು ಹೀಗಾಗಿ ಅವರು ಸಹ ಮಾವನ ಮನೆಗೆ ಹೋಗಿ ಬೆಳಿಗ್ಗೆ ಉಪಹಾರ ಸೇವಿಸಿ ಬಂದಿದ್ದರು.
ಆನಂತರ ತಾವು ವಾಸವಿದ್ದ ಮನೆಯಲ್ಲಿಯೇ ಪ್ಯಾನ್ ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ ಆತ್ಮಹತ್ಯೆಗೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚನ್ನರಾಯಪಟ್ಟಣದಲ್ಲಿ ಎರಡು ಕೊಲೆ ನಡೆದಿರುವುದಕ್ಕೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ವಾಟ್ಸಪ್ ಗಳಲ್ಲಿ ಸಂದೇಶ ಹರಿದಾಡಿತ್ತು.
ಅಲ್ಲದೆ, ಇವತ್ತು ಹಾಸನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಪಿ ಭೇಟಿ ನೀಡುವ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಳ್ಳುವ ಹೆದರಿಕೆಗೆ ಸಿಲುಕಿ ಈ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ತನಿಖೆಯ ಜಾಡು ಹಿಡಿದಿದ್ದಾರೆ.
ಅಸಲಿಗೆ ಇನ್ನೂ ಹಲವು ವರ್ಷಗಳ ಬಾಳಿ ಉನ್ನತ ಬದುಕ ಸಾಗಿಸಬೇಕಾಗಿದ್ದ ದಕ್ಷ ಪಿಎಸ್ ಐ ಒಬ್ಬರು ನೇಣಿಗೆ ಕರಳೊಡ್ಡುವ ಮೂಲಕ ತಮ್ಮ ಎರಡು ಪುಟ್ಟ ಮಕ್ಕಳನ್ನು ಹಾಗೂ ಹೆಂಡತಿಯನ್ನು ಅನಾಥ ಮಾಡಿರುವುದು ಜಿಲ್ಲೆಯ ಜನತೆಯನ್ನು ಹಾಗೂ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.