ಧಾರವಾಡ prajakiran.com : ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡದ ಹೊಯ್ಸಳ ನಗರದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಸಾವನ್ನಪ್ಪಿದ ಬೈಕ್ ಸವಾರರ ದೇಹಗಳು ಛಿದ್ರ ಛಿದ್ರಗೊಂಡಿದು,ಬೈಕ್ ಮೇಲೆ ಹೊರಟಿದ್ದ ಬೈಕ್ ಸವಾರರಿಗೆ ವಾಹನವೊಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರ ದೇಹಗಳು ಛಿದ್ರವಾದ ಪರಿಣಾಮ ಅವರ ಗುರುತು ಕೂಡ ಸಿಗದ ಸ್ಥಿತಿಯಲ್ಲಿ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ.
ಸಾವಿಗೀಡಾದ ಇಬ್ಬರು ಧಾರವಾಡ ತಾಲೂಕಿನ ನಿಗದಿ ಗ್ರಾಮದವರು ಎಂದು ತಿಳಿದುಬಂದಿದೆ.
ಅಪಘಾತ ನಡೆದ ತಕ್ಷಣವೇ ವಾಹನ ಸವಾರ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ದೇಹದ ಭಾಗಗಳನ್ನು ಆಯ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡು ಪರಾರಿಯಾಗಿರುವ ವಾಹನದ ಪತ್ತೆಗಾಗಿ ಧಾರವಾಡ ಸಂಚಾರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.