ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ರ್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗುರುವಾರ ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಹಾಗೂ ಧಾರವಾಡದ ಸುಭಾಸ ರಸ್ತೆಯಲ್ಲಿ ನೂರಾರು ವ್ಯಾಪಾರಸ್ಥರನ್ನು ಕರೊನಾ ಟೆಸ್ಟ್ ಗೆ ಒಳಪಡಿಸಲಾಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮುಂದೆ ನಿಂತು ವ್ಯಾಪಾರಿಗಳನ್ನು ಕರೆಸಿ ಸಂಚಾರ ವಾಹನದಲ್ಲಿ ರ್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ಮಾಡಿಸಿದ್ದಾರೆ.
ಇದರಿಂದಾಗಿ ದುರ್ಗದ ಬೈಲ್ನಲ್ಲಿ 100ಕ್ಕೂ ಹೆಚ್ಚು ವ್ಯಾಪಾರಿಗಳ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ ಎಂಟು ಜನರಿಗೆ ಕೊವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಸೊಂಕು ದೃಢಪಡುತ್ತಿದ್ದಂತೆಅವರನ್ನು ಆಂಬ್ಯುಲೆನ್ಸ್ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಅಲ್ಲದೆ, ಸೋಂಕಿತ ವ್ಯಾಪಾರಿಗಳ ಅಂಗಡಿಗಳನ್ನು ಸೀಲ್ಡೌನ್ ಮಾಡಲಾಯಿತು. ಇದರಿಂದಾಗಿ ದುರ್ಗದ ಬೈಲ್ ಮಾರುಕಟ್ಟೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಮನೆಮಾಡಿತ್ತು.
ರ್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ಗೆ ಬೆದರಿದ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆ ಸೇರಲು ಶುರು ಮಾಡಿದರು.
ಅಲ್ಲದೆ, ವರ ಮಹಾಲಕ್ಷ್ಮಿ ಹಬ್ಬದ ನಿಮಿತ್ತ ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಯಲ್ಲಿ ದಿಢೀರ್ ಕಾರ್ಯಾಚರಣೆ ಸಂಚಲನ ಸೃಷ್ಟಿಸಿತು.
ಜನತೆ ಕ್ಷಣಕಾಲದಲ್ಲಿ ಮನೆಗಳತ್ತ ಕಾಲು ಕಿತ್ತರು. ಇದರಿಂದಾಗಿ ಕಿರಾಣಿ, ದಿನಸಿ, ಹೋಲ್ಸೇಲ್, ಜವಳಿ, ಜ್ಯುವೇಲರಿ, ತರಕಾರಿ ವ್ಯಾಪಾರಿಗಳು ಅಂಗಡಿಗಳ ಶೆಟ್ಟರ್ಸ್ ಎಳೆದು ಬೀಗ ಜಡಿದು ಬಿಟ್ಟರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ನಿತೇಶ್ ಪಾಟೀಲ್, ಹುಬ್ಬಳ್ಳಿ- ಧಾರವಾಡದಲ್ಲಿ ರ್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ನಿನ್ನೆಯಿಂದ ಪ್ರಾರಂಭಿಸಲಾಗಿದೆ.
ಅವಳಿ ನಗರದ 15 ಕಡೆಗಳಲ್ಲಿ ಕೊವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿನಿತ್ಯ ಒಂದು ಸಾವಿರ ಟೆಸ್ಟ್ ಮಾಡುವ ಗುರಿ ಇದೆ.
ಜನದಟ್ಟಣೆ ಇರುವ ಸ್ಥಳಗಳಲ್ಲಿ ಕೊವಿಡ್ ಪರೀಕ್ಷೆ ನಡೆಯಲಿದೆ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ನಿರಂತರವಾಗಿ ಟೆಸ್ಟ್ ನಡೆಸಲಾಗುವುದು ಎಂದಿದ್ದಾರೆ.
ಕಾರ್ಯಾಚರಣೆಗೆ ಡಿಎಚ್ಓ ಯಶವಂತ ಮದೀನಕರ್, ಹು- ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಹಾಗೂ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದರು.