ಕಾರವಾರ prajakiran.com : ಗೋವಾ ರಾಜ್ಯ ಗಡಿ ಕೊನೆಗೂ ಪ್ರವೇಶಕ್ಕೆ ಮುಕ್ತವಾಗಿದ್ದು. ಸೆ. 1ರಿಂದ ಕನ್ನಡಿಗರು ಯಾವುದೇ ಅಡೆ ತಡೆ ಇಲ್ಲದೆ ಪ್ರವೇಶ ಮಾಡಬಹುದು.
ಈ ಹಿಂದೆ ದೇಶದ ಎಲ್ಲಾ ರಾಜ್ಯಗಳ ಗಡಿ ಪ್ರವೇಶ ತೆರವುಗೊಳಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದ್ದರೂ ಗೋವಾ ಸರ್ಕಾರ ಮಾತ್ರ ತನ್ನ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಗೆ ಎರಡು ಸಾವಿರ ಹಣ ನಿಗದಿ ಪಡಿಸಿ, ನಿರ್ಬಂಧ ಹೇರಿತ್ತು.
ಈ ಹಿನ್ನಲೆಯಲ್ಲಿ ಕರ್ನಾಟಕ –ಗೋವಾ ಗಡಿ ಜಿಲ್ಲೆಯ ಜನರಿಗೆ ಗೋವಾ ರಾಜ್ಯಕ್ಕೆ ಕೆಲಸ ನಿಮಿತ್ತ ಹೋಗಿ ಬರಲು ತುಂಬಾ ಕಷ್ಟಕರವಾಗಿತ್ತು. ಪ್ರತಿ ವ್ಯಕ್ತಿ ಎರಡುಸಾವಿರ ಹಣ ನೀಡಿ ಗೋವಾ ಪ್ರವೇಶಿಸುವುದೇ ದೊಡ್ಡ ಸಮಸ್ಯೆಯಾಗಿತ್ತು.
ಈ ಹಿನ್ನಲೆಯಲ್ಲಿ ಗೋವಾ ಗಡಿ ಭಾಗದ ಕನ್ನಡಿಗರು ಪ್ರತಿಭಟನೆ ನಡೆಸಿ, ತಮ್ಮಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಗೋವಾ ಸರ್ಕಾರಕ್ಕೆ ಮನವಿ ಮೂಲಕ ಗಡುವು ನೀಡಿ ಗಮನ ಸೆಳೆದಿದ್ದರು.
ಇನ್ನು ಹುಬ್ಬಳ್ಳಿ,ಧಾರವಾಡ, ಉತ್ತರಕನ್ನಡ, ಗದಗ, ಹಾವೇರಿ, ಕೊಪ್ಪಳ ಭಾಗದ ಜನರಿಗೆ ಉದ್ಯೋಗ ನಿಮಿತ್ತ ಗೋವಾಕ್ಕೆ ತೆರಳಲು ಪರದಾಡುವಂತಾಗಿತ್ತು.
ಈ ಸಮಸ್ಯೆ ಬಗ್ಗೆ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರು ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ಸೆಪ್ಟಂಬರ್ ಒಂದರಿಂದ ಗೋವಾ –ಕರ್ನಾಟಕ ಗಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು.
ಈ ಕುರಿತು ಮಹಾರಾಷ್ಟ್ರದ ಪತ್ರಿಕಾ ಸಂದರ್ಶನದಲ್ಲಿ ಪ್ರಸ್ತಾಪಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೆಪ್ಪೆಂಬರ್ 1 ರಿಂದ ಗೋವಾ ರಾಜ್ಯದ ಎಲ್ಲಾ ಗಡಿಯನ್ನು ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಉತ್ತರಕರ್ನಾಟಕದ ಜನತೆ ಗೋವಾ ಪ್ರವೇಶಕ್ಕೆ ಕಾತರದಿಂದ ಎದುರು ನೋಡುತ್ತಿರುವುದು ಸುಳ್ಳಲ್ಲ.