ಬೆಂಗಳೂರು prajakiran.com : ಮಾದಕ ಜಗತ್ತಿನ ನಂಟು ಹೊಂದಿರುವ 10-15 ಜನರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ ತಿಳಿಸಿದ್ದಾರೆ.
ಅವರು ಸೋಮವಾರ ಸುದೀರ್ಘವಾದ ವಿಚಾರಣೆ ಬಳಿಕ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದರು.
ಡ್ರಗ್ಸ್ ರಾಯಭಾರಿಗಳಾಗಿರುವ ಕೆಲ ಸೆಲೆಬ್ರಿಟಿಗಳಿಗೆ ಬಿಸಿ ತಾಕಿಸುವ ಉದ್ದೇಶದಿಂದ ಯಾರಾರು ಭಾಗಿಯಾಗಿದ್ದಾರೆ. ಸಂಪರ್ಕದಲ್ಲಿದ್ದಾರೆ.
ಮಾದಕ ವಸ್ತುಗಳ ವ್ಯಸನಿಗಳ ಹೆಸರು, ಮಾಹಿತಿ ಹಾಗೂ ದಾಖಲೆ ಸಮೇತ ಮಾಹಿತಿ ನೀಡಿದ್ದೇನೆ. ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಹಲವು ಜಾಗಗಳ ಹೆಸರು ಕೊಟ್ಟಿದ್ದೇನೆ.
ಅವರ ಬಳಿಯೂ ಕೆಲವು ಮಾಹಿತಿ ಇದೆ. ತನಿಖೆಗೆ ಸಂಬಂಧಿಸಿದ ಹಲವಾರು ಮಾಹಿತಿ ನೀಡಿದ್ದೇನೆ. ಸಿಸಿಬಿ ವಿಚಾರಣೆ ಬಳಿಕ ಎಲ್ಲವೂ ಸತ್ಯ ಹೊರಬರಲಿದೆ ಎಂದರು.
ಸಾಮಾಜಿಕ ಹಿತದೃಷ್ಟಿಯಿಂದ ನಾನು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಯುವಪಿಳಿಗೆಗೆ ಈ ಬಗ್ಗೆ ಎಚ್ಚರಿಕೆ, ಭಯ ಇರಲಿ, ಅದರ ಬಗ್ಗೆ ಜಾಗೃತಿ ಕೂಡ ಇರಲಿ ಎಂದು ವಿವರಿಸಿದ್ದೇನೆ.
ನನಗೆ ಬೆಂಬಲಿಸಿದ ಕೆಲ ಸಿನಿಮಾ ನಿರ್ಮಾಪಕರು, ರಾಜಕಾರಣಿಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದವರಿಗೆ ಧನ್ಯವಾದಅರ್ಪಿಸುತ್ತೇನೆ ಎಂದರು.
ಇದೇ ವೇಳೆ ನಾನು ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿಯಲ್ಲ. ನನ್ನ ವಿರುದ್ದ ಹಲವರು ವಾಗ್ದಾಳಿ ನಡೆಸುತ್ತಿದ್ದಾರೆ. ನಾನು ಅಂತಹವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ. ಸಾಮಾಜಿಕ ಕಳಕಳಿಯಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಮೃತಪಟ್ಟ ಯುವ ನಟನ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂಬ ಹೇಳಿಕೆ ಹಿಂದಕ್ಕೆ ಪಡೆಯುತ್ತಿದ್ದೇನೆ. ಒಳ್ಳೆಯ ದೃಷ್ಟಿಯಿಂದ ಆ ಹೇಳಿಕೆ ನೀಡಿದ್ದೇನೆ.
ಅವರ ಕುಟುಂಬದವರಿಗೆ ನೋವು ಮಾಡುವ ಉದ್ದೇಶದಿಂದ ಹೇಳಿಲ್ಲ. ಒಳ್ಳೆಯ ಉದ್ದೇಶದಿಂದ ಇನ್ನೂ ಬಾಳಿ ಬದುಕಬೇಕಿದ್ದ ಎಂದು ಹೇಳಿದ್ದೇನೆ ಎಂದರು.
ತಮ್ಮದೇ ಕಚೇರಿಯಲ್ಲಿ ಕೆಲಸ ಮಾಡುವ ಪತ್ರಕರ್ತನಿಗೆ ಸುಪಾರಿ ಕೊಟ್ಟ ವ್ಯಕ್ತಿಗಳ ಬಗ್ಗೆಯಾಗಲಿ, ಬೇರೆ ಸಾಹಿತ್ಯವನ್ನು ಕಾಫಿ ಮಾಡುವವರ ಬಗ್ಗೆ ನಾನು ಪ್ರತಿಕ್ರಿಯಿಸಿಲ್ಲ ಎಂದು ವಿರುದ್ದ ಪರೋಕ್ಷವಾಗಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ ವಿರುದ್ದವು ಹರಿಹಾಯ್ದರು.