ನವದೆಹಲಿ prajakiran.com : ಸುಪ್ರೀಂಕೋರ್ಟ್ ಕಾರ್ಯವೈಖರಿ ಬಗ್ಗೆ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು.
ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ತಿಂಗಳ ವಕೀಲ ವೃತ್ತಿಗೆ ನಿಷೇಧ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ಸುಪ್ರೀಂಕೋರ್ಟ್ ನಲ್ಲಿ ಆ. 5 ರಂದು ಪ್ರಶಾಂತ್ ಭೂಷಣ್ ವಿರುದ್ಧ ಅರ್ಜಿ ವಿಚಾರಣೆ ಆರಂಭವಾಗಿ, ಆ. 14 ರಂದು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು.
ಆದರೆ, ಆ. 20 ರಂದು ಶಿಕ್ಷೆ ಪ್ರಮಾಣ ಘೋಷಿಸುವ ವೇಳೆ ನಡೆದ ವಿಚಾರಣೆಯಲ್ಲಿ ಬೇಷರತ್ ಕ್ಷಮೆಯಾಚಿಸಲು ಪ್ರಶಾಂತ ಭೂಷಣ್ ನಿರಾಕರಿಸಿದ್ದರು.
ಅಲ್ಲದೆ, ನನ್ನ ಟ್ವೀಟ್ಗಳು ನಾನು ನಾಗರಿಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ.
ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯವು ವಿಧಿಸಬಹುದಾದ ಯಾವುದೇ ಶಿಕ್ಷೆ/ದಂಡವನ್ನು ಎದುರಿಸುತ್ತೇನೆ.
ಆದರೆ ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಮತ್ತೇ ಸುಪ್ರೀಂ ಕೋರ್ಟ್ ಅವರಿಗೆ ಕ್ಷಮೆ ಕೇಳಲು ಮತ್ತು ತಮ್ಮ ಹೇಳಿಕೆಯನ್ನು ಬದಲಿಸಲು ಮೂರುದಿನಗಳ ಸಮಯ ನೀಡಿತ್ತು.
ಹೀಗಾಗಿ ಆ. 24 ರಂದು ಮತ್ತೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಸಮಯ ನೀಡಿ ಕ್ಷಮೆ ಕೇಳುವಂತೆ ನಿರ್ದೇಶನ ನೀಡಿತ್ತು. ಆದರೆ ಅಂದು ಕೂಡ ಪ್ರಶಾಂತ ಭೂಷಣ್ ಕ್ಷಮೆಯಾಚಿಸಲಿಲ್ಲ.
ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಿ, ಪ್ರಕರಣ ಬಿಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಆ. 25ರಂದು ಮನವಿ ಮಾಡಿದ್ದರು.
ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣಮುರಾರಿಯವರಿದ್ದ ಪೀಠದ ಎದುರು ಪ್ರಶಾಂತ ಭೂಷಣ್ ಪರವಾಗಿ ಹಿರಿಯ ವಕೀಲರಾದ ದುಷ್ಯಂತ್ ಧವೆ ಮತ್ತು ರಾಜೀವ್ ಧವನ್ ವಾದ ಮಂಡಿಸಿದ್ದರು.