ಹುಬ್ಬಳ್ಳಿ prajakiran. com : ಹುಬ್ಬಳ್ಳಿಯ ಗಲಭೆಯ ಹಿಂದೆ ಕೆಲವು ಕಾಣದ ಕೈಗಳ ಕೈವಾಡಗಳ ಶಂಕೆ ವ್ಯಕ್ತವಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ತನಿಖೆ ನಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆ ಆಗಬಾರದಾಗಿತ್ತು, ಆದರೆ ಆಗಿದೆ ಎಂದರು.
ಅಂದು ಘಟನಾ ವೇಳೆ ಸುಮಾರು ಸಮಯ ಲೈಟ್ ಆಫ್ ಆಗಿತ್ತು. ಆ ವೇಳೆ ಲೈಟ್ ಆಫ್ ಮಾಡಿದವರು ಯಾರು? ಮುಖ ಮುಚ್ಚಿಕೊಂಡು ಕಲ್ಲು ಎಸೆದವರು ಯಾರು? ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೋಲಿಸ್ ಕಮಿಷನರ್ ಹಾಗೂ ಎಜಿಡಿಪಿ ಪ್ರತಾಪ್ ರೆಡ್ಡಿ ಅವರಿಗೆ ಮನವಿ ಮಾಡಿದ್ದೇವೆ ಎಂದರು.
ಕಳೆದ ಐದಾರು ತಿಂಗಳಿಂದ ರಾಜ್ಯದಲ್ಲಿ ಈ ತರಹದ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಏನೂ? ಹುಬ್ಬಳ್ಳಿಯ ಗಲಾಟೆ ವಿಚಾರದಲ್ಲಿ ಅಭಿಷೇಕ್ ಹಿರೇಮಠ ಎಂಬ ಯುವಕ ಫೋಸ್ಟ್ ಮಾಡಿದ್ದಾನೆ. ಅವನ ಹಿಂದೆ ಕೆಲವು ಶಕ್ತಿಗಳು, ವ್ಯಕ್ತಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಪೋಸ್ಟ್ ಮಾಡಿದ ಕೂಡಲೇ ಇಂತಹ ಘಟನೆಗಳು ಆಗತ್ತಾ ಇವೆ. ಹಾಗಾಗಿ ಪ್ರಾಮಾಣಿಕ ತನಿಖೆ ನಡೆಯಬೇಕೆಂದು ಎಂದು ಸಲೀಂ ಅಹ್ಮದ್ ತಿಳಿಸಿದರು.
ಕೆ.ಎಸ್.ಈಶ್ವರಪ್ಪ ಬಂಧಿಸಬೇಕು:
ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವೆಂದು ಜಗಜಾಹೀರಾಗಿದೆ. ಗುತ್ತಿಗೆದಾರ ಸಂಘ ಕೂಡಾ 40% ಕಮಿಷನ್ ಸರ್ಕಾರ ಎಂದು ಹೆಸರು ನೀಡಿದೆ.
ಬಿಜೆಪಿಯ ಕಾರ್ಯಕರ್ತ ಸಂತೋಷ ಪಾಟೀಲ್ ಕೂಡಾ 40% ಕಮಿಷನ್ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ದತೆ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಆ ನಂತರ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಭ್ರಷ್ಟಾಚಾರ ಆರೋಪ ಹೊತ್ತಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧನ ಮಾಡಬೇಕು. ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಲೀಂ ಅಹ್ಮದ್ ಹರಿಹಾಯ್ದರು.