ಬೆಂಗಳೂರು prajakiran.com : ಮಾಜಿ ಸಚಿವ ವಿನಯ ಕುಲಕರ್ಣಿಯವರ ವಿರುದ್ದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿನಯಕುಲಕರ್ಣಿ ಲಿಂಗಾಯತ ಹಾಗೂ ಪಂಚಮಸಾಲಿ ಸಮಾಜದ ಮುಖಂಡ.ಅವರ ಬೆಳವಣಿಗೆಯನ್ನು ಸಹಿಸದೆ ಕೆಲವರು ರಾಜಕೀಯ ಲೆಕ್ಕಚಾರಕ್ಕಾಗಿ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರ ವಿರುದ್ದ ಪತ್ರಿಕಾಗೋಷ್ಠಿಯ ಉದ್ದಕ್ಕೂ ಹರಿಹಾಯ್ದ ಸ್ವಾಮೀಜಿ, ಯಾರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಅಲ್ಲದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿಯ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಅಲ್ಲದೆ, ವಿನಯ ಕುಲಕರ್ಣಿಯವರಾಗಲಿ, ಅವರ ಅಭಿಮಾನಿಗಳಾಗಲಿ, ಸಮಾಜದ ಬಂಧುಗಳಾಗಲಿ ಇದರಿಂದ ಧೃತಿಗೇಡುವುದು ಬೇಡ, ಅವರೊಂದಿಗೆ ನಾವಿದ್ದೇವೆ. ಪಂಚಮಸಾಲಿ ಸಮಾಜವಿದೆ ಎಂದು ಬ್ಯಾಟಿಂಗ್ ಬೀಸಿದರು.
ವಿನಯ ಕುಲಕರ್ಣಿಯವರ ಮನೆತನ ಬಹುದೊಡ್ಡಿದಿದೆ.ಅದರಲ್ಲೂ ಮಠ ಮಾನ್ಯಗಳಿಗೆ ಅಪಾರ ಕೊಡುಗೆ ನೀಡಿದೆ.
ಒಂದು ನೋಟಿಸ್ ಕೂಡ ನೀಡದೆ ಏಕಾಎಕಿ ಅವರ ಮನೆಗೆ ಹೋಗಿ, ಒಬ್ಬ ಅಪರಾಧಿ ರೀತಿಯಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದು ನಾನು ಖಂಡಿಸುತ್ತೇನೆ ಎಂದು ಕೂಡಲಸಂಗಮ ಸ್ವಾಮೀಜಿ ಹೇಳಿದರು.