ಬೆಂಗಳೂರು prajakiran.com : ಕರೋನಾ ಲಾಕ್ ಡೌನ್ ನಿಂದ ಜನತೆ ಸಂಕಷ್ಟದಲ್ಲಿರುವುದರಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 1,250 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹೆಕ್ಟೇರ್ ಹೂವು ಬೆಳೆಗಾರರಿಗೆ 10 ಸಾವಿರ ರೂಪಾಯಿ ಪರಿಹಾರ ಧನ,
ರಾಜ್ಯದ ಹಣ್ಣು, ತರಕಾರಿ ಬೆಳೆಯುವ ರೈತರಿಗೆ 12.73 ಕೋಟಿ ರೂಪಾಯಿ ಮೌಲ್ಯದಲ್ಲಿ ನೆರವು ನೀಡಲಿದ್ದೇವೆ, ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ರೂಪಾಯಿ ನೀಡಲಾಗುತ್ತದೆ.
ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೀಡಲಿದ್ದೇವೆ. ಕಟ್ಟಡ ಕಾರ್ಮಿಕರಿಗೆ, ಕಲಾವಿದರಿಗೆ ತಲಾ 3 ಸಾವಿರ ರೂಪಾಯಿ,
ರಸ್ತೆ ಬದಿ ವ್ಯಾಪಾರಿ, ಸವಿತಾ, ಕಮ್ಮಾರ, ಕುಂಬಾರ, ಚಮ್ಮಾರರಿಗೆ, ಅಕ್ಕಸಾಲಿಗರಿಗೆ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ ಸಹಾಯ ಧನ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ಎಪಿಎಲ್ ಕಾರ್ಡ್ ದಾರರಿಗೆ ಹತ್ತು ಕೆಜಿ ಅಕ್ಕಿ ತಲಾ ಹದಿನೈದು ರೂಪಾಯಿ ನಂತೆ ವಿತರಣೆ, ಬಿಪಿಎಲ್ ಕಾರ್ಡ ದಾರರಿಗೆ ಐದು ಕೆಜಿ ಉಚಿತ ಅಕ್ಕಿ ವಿತರಣೆ, ಮೂರು ತಿಂಗಳ ಸಾಲ ಮರುಪಾವತಿ ವಿಸ್ತರಣೆ ಮಾಡಲಾಗಿದೆ ಎಂದು ವಿವರಿಸಿದರು.