ನವದೆಹಲಿ prajakiran.com : ಸಿಂಗಾಪುರದಲ್ಲಿ ಹೊಸ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಿಂಗಾಪುರ್ ನಿರಾಕರಿಸಿದ್ದು, ಕೇಜ್ರಿವಾಲ್ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸಿಂಗಾಪುರ್ ಆರೋಗ್ಯ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ, ಸಿಂಗಾಪುರದಲ್ಲಿ ಪತ್ತೆಯಾಗಿರುವ ಕೋವಿಡ್ ಹೊಸ ತಳಿಯ ಸೋಂಕು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಿಂಗಾಪುರದಿಂದ ಆಗಮಿಸುವ ಎಲ್ಲಾ ವಿಮಾನ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.
ಅರವಿಂದ ಕೇಜ್ರಿವಾಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಂಗಾಪುರ್ ಆರೋಗ್ಯ ಸಚಿವಾಲಯ, ಸಿಂಗಾಪುರ್ ಕೋವಿಡ್ ತಳಿ ಇಲ್ಲ,
ಅಲ್ಲದೇ ಕೇಜ್ರಿವಾಲ್ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದೆ.
ಇತ್ತೀಚೆಗಿನ ಕೆಲವು ವಾರಗಳಲ್ಲಿ ಪತ್ತೆಯಾಗಿರುವ ಕೋವಿಡ್ 19 ಪ್ರಕರಣಗಳಲ್ಲಿನ ಬಿ.1.617.2 ರೂಪಾಂತರಿ ಸೋಂಕು ಭಾರತದಲ್ಲಿ ಹುಟ್ಟಿಕೊಂಡಿರುವುದಾಗಿದೆ ಎಂದು ಸಿಂಗಾಪುರ್ ಸಚಿವಾಲಯ ತಿರುಗೇಟು ನೀಡಿದೆ.