ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಧಾರವಾಡದ ಮೂರನೇ ಅಧಿಕ ವಿಶೇಷ ನ್ಯಾಯಾಲಯ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದೆ.
ಧಾರವಾಡದ ಮೂರನೇ ಅಧಿಕ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಪಂಚಾಕ್ಷರಿ ಎಂ. ಅವರು ಈ ಆದೇಶ ಹೊರಡಿಸಿದ್ದಾರೆ.
ಸಿಬಿಐ ಅಧಿಕಾರಿಗಳ ಪರ ವಿಶೇಷ ಅಭಿಯೋಜಕರು ವಿನಯ ಕುಲಕರ್ಣಿಯವರನ್ನು ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಸಿಬಿಐ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲ ಬಾಹುಬಲಿ ಧನವಡೆ ಅವರ ಮನವಿಗೆ ತಕರಾರು ಸಲ್ಲಿಸಿದರು.
ಈ ಹಿನ್ನಲೆಯಲ್ಲಿ ನ್ಯಾಯಾಧೀಶರು ಈ ಕುರಿತು ವೀಡಿಯೋ ಕಾನ್ಪರೆನ್ಸ್ ಮೂಲಕ ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಹೀಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಒಂದು ದಿನದ ಮಟ್ಟಿಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸಿಬಿಐ ಅಧಿಕಾರಿಗಳು ಸ್ಥಳಾಂತರಿಸಿದರು.
ಅವರನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ವಿನಯ ಕುಲಕರ್ಣಿಯವರ ಬೆಂಬಲಿಗರ ಘೋಷಣೆ, ಆಕ್ರೋಶ ಹಾಗೂ ಆರ್ಭಟ ಜೋರಾಗಿತ್ತು.
ಠಾಣೆ ಮುಂಭಾಗದಲ್ಲಿ ಪರಿಸ್ಥೀತಿ ಬಿಗುವಿನಿಂದ ಕೂಡಿದ್ದರಿಂದ ಮುಂಜಾಗ್ರತ ಕ್ರಮವಾಗಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.