ಧಾರವಾಡ prajakiran.com : ದೇಶದ ಎಲ್ಲಾ ಜನರಿಗೆ ಉಚಿತ ಲಸಿಕೆ ನೀಡುವಂತೆ ಮತ್ತು ಕೊರೊನಾ ಮಹಾಮಾರಿಯನ್ನು ವೈಜ್ಞಾನಿಕವಾಗಿ ನಿಯಂತ್ರಿಸುವಂತೆ ಆಗ್ರಹಿಸಿ ಶನಿವಾರ ಸಿಟಿಜನ್ ಫಾರ್ ಡೆಮಾಕ್ರಸಿ ರಾಷ್ಟ್ರೀಯ ಸಮಿತಿ ಕರೆಯ ಮೇರಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ದೆಹಲಿ, ಬಿಹಾರ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತಮ್ಮ ಮನೆಗಳಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸಿದ ನೂರಾರು ಸಿಎಫ್ ಡಿ ಕಾರ್ಯಕರ್ತರು ಕೋರೋನಾ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಸ್ ಆರ್. ಹಿರೇಮಠ ಆಪಾದಿಸಿದರು.
ಧಾರವಾಡದ ತಮ್ಮ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಸಿಎಫ್ ಡಿ ರಾಷ್ಟ್ರೀಯ ಅಧ್ಯಕ್ಷ, ದೇಶ ಇಂದು ಸಂಕಷ್ಟ ಕಾಲವನ್ನು ಎದುರಿಸುತ್ತಿದೆ. ಕೋರೋನಾ ಎರಡನೇ ಅಲೆಯ ರುದ್ರನರ್ತನ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದರೆ,ಲಕ್ಷಾಂತರ ಜನರ ಬದುಕನ್ನೇ ಸರ್ವನಾಶ ಮಾಡಿದೆ ಎಂದರು.
ಕೋರೋನಾ ವ್ಯಾಪಕವಾಗಲು ಸರ್ಕಾರದ ಬೇಜವಾಬ್ದಾರಿ ಆಡಳಿತ, ಜನರ ಜೀವದ ಬಗ್ಗೆ ಆಳುವವರಲ್ಲಿರುವ ನಿಷ್ಕಾಳಜಿಯೇ ಕಾರಣ ಎಂದು ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಭಾಷಣಕ್ಕೆ ಸಿಮೀತವಾಗಿದ್ದು ಕೃತಿಯಲ್ಲಿ ಶೂನ್ಯರಾಗಿದ್ದಾರೆ ಎಂದರು.
ಕೋರೋನಾ ಎರಡನೆ ಅಲೇಯ ಭೀಕರ ಪರಿಣಾಮದ ಎಚ್ಚರಿಕೆಯಿದ್ದರೂ ಐದು ರಾಜ್ಯಗಳಲ್ಲಿ ಬರ್ಜರಿ ಚುನಾವಣಾ ಪ್ರಚಾರ ಕೈಗೊಂಡರು, ಕುಂಭಮೇಳ ನಡೆಸಿದ ನರೇಂದ್ರ ಮೋದಿ ಕೋರೋನಾ ಎದುರಿಸಲು ಆಡಳಿತ ಯಂತ್ರವನ್ನು ಸಜ್ಜುಗೊಳಿಸಲೇ ಇಲ್ಲ.
ಇದರ ಪರಿಣಾಮ, ಇಂದು ದೇಶದ ಹಲವೆಡೆ ಕೋರೋನಾ ಪೀಡಿತರು ಆಕ್ಸಿಜನ್, ವೆಂಟಿಲೇಟರ್, ಸೇರಿದಂತೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗದೇ ಹಾದಿ ಬೀದಿಯಲ್ಲಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.
ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಿರುವ ಸರಕಾರ ಈಗ ವ್ಯಾಕ್ಸಿನ್ ನೀಡುವಲ್ಲಿ ರಾಜಕೀಯ ಮಾಡುತ್ತಿದೆ. ರಾಜ್ಯಕ್ಕೆ ಒಂದು ಕೇಂದ್ರಕ್ಕೆ ಒಂದು ದರ ಎನ್ನುತ್ತ ಹಣವಿದ್ದವರೂ ಮಾತ್ರ ಬದುಕಿ ಎಂಬ ಪರೋಕ್ಷ ಸಂದೇಶ ನೀಡುತ್ತಿದೆ.
ಕಾರಣ, ಎಲ್ಲ ರಾಜಕೀಯ, ವ್ಯವಹಾರಿಕ ಲೆಕ್ಕಾಚಾರಗಳನ್ನು ಬದಿಗೊತ್ತಿ ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ ನೀಡಬೇಕು ಮತ್ತು ಕೋರೋನಾ ಪರೀಕ್ಷೆಯನ್ನು ಇನ್ನಷ್ಟು ವ್ಯಾಪಕಗೊಳಿಸಿ ಯುದ್ದೊಪಾದಿಯಲ್ಲಿ ಕೋರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ರಾಷ್ಟ್ರೀಯ ನಾಯಕರಾದ ಎನ್ ಡಿ ಪಾಂಚೋಲಿ, ಡಾ. ರಮೇಂದರ್, ಅನೀಲ ಸಿನ್ಹಾ, ರಾಮಶರಣ, ದೀಪಕ ಡೋಲಕಿಯಾ, ಮನಿಮಾಲಾ, ಅರುಣ ಮಾಜಿ, ರಾಮಕಿಶೋರ್ ಘನಶಾಮ, ಶಾಲು ನಿಗಮ, ಮಾಲತಿ, ತೇಜೇಂದರ್ ಸಿಂಗ್ ಅಹುಜಾ, ಅಮರನಾಥ ಬಾಯಿ, ಮೋಹನ ಹೀರಾಬಾಯಿ, ಕುಮಾರ್ ಸಿನ್ಹಾ, ವಿನೋದ ರಾಜನ್, ಅರವಿಂದ ಮೂರ್ತಿ, ಉಮೇಶ್ ಶರ್ಮಾ,ಜಯಂತ ದಿವಾನ್, ಅಮನ ಶರ್ಮಾ, ಕರ್ನಾಟಕ ಸಿಎಫ್ ಡಿ ಅಧ್ಯಕ್ಷ ಡಾ ಟಿ ಆರ್ ಚಂದ್ರಶೇಖರ, ರಾಜ್ಯ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲ, ಪರುಶುರಾಮ ಚುರಮುರಿ, ಸೇರಿದಂತೆ ಹಲವರು ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.