ಧಾರವಾಡ : ನಕಲಿ ಜಿ.ಪಿ.ಎ. ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪ ನೋಂದಣಾಧಿಕಾರಿ ಬಾವೂರ ಟಿ.ಎನ್. ಸೇರಿದಂತೆ ಆರು ಜನರ ವಿರುದ್ದ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಇಟಿಗಟ್ಟಿ ಗ್ರಾಮದ ಹದ್ದಿನಲ್ಲಿನ ಸ.ನಂ.10 ರ ಪೈಕಿ 5 ಎಕರೆ ಜಮೀನಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
1974 ರಿಂದ ಈ ಜಮೀನು ಗ್ರಾಮದ ಪರಿಶಿಷ್ಠ ಪಂಗಡಕ್ಕೆ ಸೇರಿದ ರೈತ ಅಯ್ಯಪ್ಪ ಹನುಮಂತಪ್ಪ ಚಿಮಟಪ್ಪನವರ ಹೆಸರಿನಲ್ಲಿತ್ತು.
ಅಯ್ಯಪ್ಪ ನಿಧನರಾದ ನಂತರ ಮಗಳು ಬಸವ್ವ ನಿಂಗಪ್ಪ ಗಾಮನಗಟ್ಟಿ ಉಫ್೯ ಚಿಮಟ್ಪನವರ ವಾರಸುದಾರರಾಗಿ ಮುಂದುವರೆದಿದ್ದರು.
ಬಳಿಕ ಜಮೀನಿನ ವಿವಾದವೊಂದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯೊಂದು 2019 ರಲ್ಲಿ ಹೈಕೋಟ್೯ನಲ್ಲಿ ದಾಖಲಾಗಿತ್ತು.
ಈ ಅರ್ಜಿ ವಿಚಾರಣೆಯ ಸಮಯದಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ಬೇರೊಬ್ಬರ ಪೋಟೋ ಮತ್ತು ಸಹಿ ಬಳಸಿ, ಉಪ ನೋಂದಣಾಧಿಕಾರಿಗಳ ಬಳಿ ದಿ.13.4.2015 ರಂದು ನಕಲಿ ಜಿ.ಪಿ.ಎ. ನೋಂದಣಿ ಮಾಡಿಸಲಾಗಿದೆ.
ಧಾರವಾಡದ ಉಪ ನೋಂದಣಿ ಅಧಿಕಾರಿ ಟಿ.ಎನ್ ಬಾವೂರ, ಯಾಲಕ್ಕಿ ಶೆಟ್ಟರ್ ಕಾಲನಿಯ ಅನುಪಮಾ ಸಂಜಯ ಜೋಶಿ, ನವಲೂರ ಗ್ರಾಮದ ಅಶೋಕ ಮಾ.ಬೆಳ್ಳಿಗಟ್ಟಿ, ದುಮ್ಮವಾಡ ಗ್ರಾಮದ ಮಹಾದೇವ ಮಲ್ಲಪ್ಪ ಬ್ಯಾಡರಕೊಪ್ಪ, ದಸ್ತು ಬರಹಗಾರ ಶ್ರೀಧರ್ ಆರ್.ಕುಲಕರ್ಣಿ ಸೇರಿದಂತೆ ಒಟ್ಟು ಆರು ಜನರು ಜಮೀನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಠಿಸಿ ತಮಗೆ ವಂಚನೆ ಮಾಡಿದ್ದಾರೆ ಎಂದು ಬಸವ್ವ ಗಾಮನಗಟ್ಟಿ ದೂರಿನಲ್ಲಿ ಆರೋಪಿಸಿದ್ದಾರೆ.
ಉಪ ನೋಂದಣಿ ಅಧಿಕಾರಿ ಟಿ.ಎನ್.ಬಾವೂರ ಕಳೆದ ಕೆಲವು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿಯೇ ತಳವೂರಿದ್ದು, ಇಂತಹ ಅನೇಕ ಪ್ರಕರಣಗಳು ನೋಂದಣಿ ಕಚೇರಿಯಲ್ಲಿ ನಡೆಯುತ್ತಿದೆ.
ಆದರೂ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಯಾರೇ ದಾಖಲೆಗಳು ತಂದರೂ ನೋಂದಣಿ ಮಾಡಿಕೊಡುವುದು ನಮ್ಮ ಕೆಲಸ ಅಂತಾರೆ ಬಾವೂರ.
ಇದೀಗ ಬಾವೂರ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಕಲಿ ಜಿಪಿಎ ಸತ್ಯಾಂಶ ಹೊರಬರಬೇಕಿದೆ.