ಕೊಡಗು prajakiran.com : ಇತ್ತೀಚೆಗೆ ಕೊಡುಗು ಜಿಲ್ಲೆಯ ನಾಗರಿಕರಿಗೆ ಆತಂಕಜ ಮೂಡಿಸಿದ್ದವಿರಾಜಪೇಟೆಯ ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 21 ರಂದು ರಾತ್ರಿ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದ ಈ ಪ್ರಕರಣ ಜಿಲ್ಲೆಯ ಜನರಿಗೆ ಭಯ ಉಂಟುಮಾಡಿತ್ತು.
ಈ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ಜೂನ್ 9ರಂದು ಎಮ್ಮೆ ಮಾಡು ನಿವಾಸಿಯಾದ ಇಬ್ರಾಹಿಂ ಖಲೀಲ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ 800 ಕಾರನ್ನು ವಶಪಡಿಸಿಕೊಂಡು, ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಮತ್ತೊಬ್ಬ ಎಮ್ಮೆಮಾಡು ನಿವಾಸಿಗಳಾದ ಕಡುವಣಿ ಅಶ್ರಫ್ ಮತ್ತು ಮುಸ್ತಾಫ ಅವರುಗಳನ್ನು ಜೂನ್ 14 ರಂದು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ಈ ಆರೋಪಿಗಳು ಈ ಹಿಂದೆ ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಅಲ್ಲದೆ ಇದೇ ಆರೋಪಿಗಳು ಎರಡು ತಿಂಗಳ ಹಿಂದೆ ವಿರಾಜಪೇಟೆ ನಗರದ ಶ್ರೀನಿವಾಸ ಎಂಬುವವರ ಮನೆಯಲ್ಲಿ ಮನೆ ಕಳ್ಳತನ ಮಾಡಿದ್ದು ಅಲ್ಲಿಂದ ಕದ್ದೊಯ್ದಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ಮಡಿಕೇರಿ ಗ್ರಾಮಾಂತರ ಠಾಣೆ ಹಾಗು ನಾಪೋಕ್ಲು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದ ಕಾಫಿ ಮತ್ತು ಕರಿಮೆಣಸು ಕಳ್ಳತನದ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿದ್ದು ಈ ಪ್ರಕರಣಗಳಲ್ಲಿ 3 ಚೀಲ ಕಾಫಿ ಹಾಗು 400 ಕೆ.ಜಿ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳ ಬಂಧನದಿಂದ ವಿರಾಜಪೇಟೆ ನಗರದ- 2 ಪ್ರಕರಣ, ಮಡಿಕೇರಿ ಗ್ರಾಮಾಂತರ ಠಾಣೆಯ-1 ಹಾಗೂ ನಾಪೋಕ್ಲು ಪೊಲೀಸ್ ಠಾಣೆಯ-1 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್, ಕಾಫಿ, ಕಾಳುಮೆಣಸು ಮತ್ತು 3 ಕಾರು ಒಂದು ಗೂಡ್ಸ್ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಆರೋಪಿಗಳು ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಇತರ ಭಾಗಗಳಲ್ಲಿ ಶ್ರೀಮಂತರ ಮನೆಗಳನ್ನು ಗುರ್ತಿಸಿ ದರೋಡೆ ಮಾಡುವ ಹೊಂಚು ಹಾಕಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.