ಧಾರವಾಡ prajakiran.com : ಮನೆ ಕೀಲಿ ಮುರಿದು ಕಳ್ಳತನ ಮಾಡಿದ ಕಳ್ಳರು ಮನೆಯಲ್ಲಿದ್ದ ರಿವಾಲ್ವರ್ ಹೊತ್ತೈದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಎದುರುಗಡೆಯಿರುವ ಶ್ರೀ ವೀರಭದ್ರ ದೇವಸ್ಥಾನದ ಹಿಂಭಾಗದಲ್ಲಿರುವ ಮನೆಯಲ್ಲಿ ಸೋಮವಾರ ಬೆಳಗಿನ ಜಾವ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಬಿಜೆಪಿ ಮುಖಂಡ ನಾಗರಾಜ ನಾಯ್ಕ ಅವರ ಸಹೋದರರಾಗಿರುವ ತರಕಾರಿ ವರ್ತಕ ಸಂತೋಷ ನಾಯ್ಕ ಅವರ ಬಾಡಿಗೆ ಮನೆಯಲ್ಲಿಯೇ ಈ ಕಳ್ಳತನ ನಡೆದಿದೆ.
ಅವರು ನಿನ್ನೇ ರಾತ್ರಿ ತಮ್ಮ ಬಾಡಿಗೆ ಮನೆಗೆ ಕೀಲಿ ಹಾಕಿಕೊಂಡು ಲಕ್ಷ್ಮಿಸಿಂಗನಕೇರಿಯಲ್ಲಿರುವ ತಮ್ಮ ಸಹೋದರರ ನಿವಾಸಕ್ಕೆ ಹೋಗಿದ್ದರು.
ಇದನ್ನು ಗಮನಿಸಿದ ಖದೀಮರು ಹೊಂಚು ಹಾಕಿ ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಒಳನುಗ್ಗಿದ ಕಳ್ಳರು ಅವರ ಮನೆಯಲ್ಲಿನ 2.50 ಲಕ್ಷ ನಗದು, ಚಿನ್ನ, ಬೆಳ್ಳಿ ಹಾಗೂ ರಿವಾಲ್ವರ್ ಕಳುವು ಮಾಡಿಕೊಂಡು ಹೋಗಿದ್ದಾರೆ.
ಬೆಳಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನ ದಳದ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಮುಂದುವರೆದಿದೆ.