ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ೧೩೫೮ ಗ್ರಾಂ ಗಾಂಜಾ ವಶ
ಚುರುಕಾದ ಪೊಲೀಸ್ ಪಡೆ
ಮಂಜುನಾಥ ಎಸ್.ರಾಠೋಡ
ಗದಗ prajakiran.com : ಬೆಂಗಳೂರು ನಲ್ಲಿ ಬೃಹತ್ತಾದ ಮಾದಕ ವಸ್ತು ಮಾರಾಟ ಜಾಲ ಪತ್ತೆಯಾದ ಬೆನ್ನಲ್ಲೇ ಗದಗ ಜಿಲ್ಲೆಯ ಪೊಲೀಸರು ಚುರುಕಾಗಿದ್ದು, ಗಾಂಜಾ ಪೂರೈಕೆ ಜಾಲದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.
ಬೆಟಗೇರಿ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ ಅಂದಾಜು ರೂ. ೧೩,೫೮೦ ಮೌಲ್ಯದ ೧೩೫೮ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಬೇಟಗೇರಿಯ ನೇಕಾರ ಕಾಲೋನಿಯ ಮಂಜುನಾಥ ಕಾಳೆ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಮಾರುತಿ ಹರನಶಿಕಾರಿ(೨೧), ಚಂದಪ್ಪ ಹರನಶಿಕಾರಿ(೨೫) ಎಂಬುವರು ಹುಬ್ಬಳ್ಳಿಯ ದೇಶಪಾಂಡೆನಗರದ ದೇಸಾಯಿ ವೃತ್ತದ ಚರ್ಚಬಳಿ ಗುರುವಾರ ಗಾಂಜಾ ಸಾಗಿಸುತ್ತಿದ್ದ ವೇಳೆ ಹುಬ್ಬಳ್ಳಿ ಪೊಲೀಸರು ಬಂದಿಸಿದ್ದಾರೆ.
ಆರೋಪಿಗಳಿಂದ ೫ ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗದಗ ಮತ್ತು ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತೆನಿಖೆ ವೇಳೆ ತಿಳಿದುಬಂದಿದೆ.
ಈ ಮಾರಾಟ ಪ್ರಕರಣಗಳು ಬೆಳಕಿಗೆ ಬಂದಿರುವುದು ಜಿಲ್ಲೆಯಲ್ಲಿ ಗಾಂಜಾ ದಂಧೆ ಮತ್ತೆ ಸಕ್ರಿಯವಾಗಿರುವುದನ್ನು ತೋರಿಸುತ್ತದೆ.
ಗಾಂಜಾ ಬೆಳೆಯುವುದನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವರು ಹಣದಾಸೆಗೆ ಹೊಲಗಳಲ್ಲಿ ಬೆಳೆಗಳ ನಡುವೆ ಇದನ್ನು ಬೆಳೆಯುತ್ತಿದ್ದಾರೆ.
ಅಂತಹ ಹಲವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ೨೦೧೮ ಮತ್ತು ೨೦೧೯ರಲ್ಲಿ ಗಾಂಜಾ ಮಾರಾಟದ ಜತೆಗೆ ನರಗುಂದ, ಮುಂಡರಗಿ, ಶಿರಹಟ್ಟಿ, ಗಜೇಂದ್ರಗಡ, ರೋಣ, ಲಕ್ಮೇಶ್ವರ ಭಾಗಗಳಲ್ಲಿ ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ. ಲಾಕ್ಡೌನ್ ಜಾರಿಗೂ ಮುನ್ನ ಗದಗನಲ್ಲಿ ಗಾಂಜಾ ಹಾವಳಿ ಹೆಚ್ಚಿತ್ತು.
ಜಿಲ್ಲೆಯಲ್ಲೂ ಡ್ರಗ್ ಮಾರಾಟ ದಂಧೆ ನಡೆಯುತ್ತಲೇ ಇದೆ. ಅದರಲ್ಲೂ ಗಾಂಜಾ ಮಾರಾಟ ನಿರಂತರವಾಗಿದೆ. ಅದನ್ನು ಬಗ್ಗುಬಡಿಯಲು ಹಳೆಯ ಮಾದಕ ವಸ್ತು ಮಾರಾಟಗಾರರ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಕುರುಚಲು ಗುಡ್ಡವಿರುವ ಗ್ರಾಮಗಳ ಜಮೀನುಗಳಲ್ಲಿ ಬೆಳೆಗಳ ನಡುವೆಯೇ ಕೆಲವರು ಬೆಳೆಯುತ್ತಿದ್ದಾರೆ. ಇಂತಹ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ.
ಗಾಂಜಾ ಗಿಡ ಕೊಂಚ ಬಲಿತ ಬಳಿಕ ಅದರ ವಾಸನೆ ಹಬ್ಬುತ್ತದೆ. ಸ್ಥಳೀಯ ಮಾಹಿತಿದಾರರಿಂದ ಇದರ ಜಾಡು ಹಿಡಿದೇ ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ” ಪ್ರಜಾಕಿರಣ.ಕಾಮ್ ಗೆ” ಮಾಹಿತಿ ನೀಡಿದರು.