ಧಾರವಾಡ Prajakiran.com : ರಾಜ್ಯದಲ್ಲಿರುವ ೪೧೩ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ೧೪,೫೬೪ ಅತಿಥಿ ಉಪನ್ಯಾಸಕರು ಮತ್ತು ೨೨,೧೫೦ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜೂನ್ ೨೫ ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ದಂಡಾಧಿಕಾರಿಗಳ ಕಚೇರಿ ಎದುರುಗಡೆ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು/ ಶಿಕ್ಷಕರ ಹೋರಾಟ ಸಮಿತಿ ಹಾಗೂ ಎಐಡಿವೈಒ ತಿಳಿಸಿವೆ.
ಸಾವಿರಾರು ಶಿಕ್ಷಕರು ಕರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರ ಬದುಕು ಅತಂತ್ರವಾಗಿದೆ. ಕಳೆದ ೪-೫ ತಿಂಗಳುಗಳಿಂದ ಅವರಿಗೆ ವೇತನ ಬಂದಿಲ್ಲ. ಕೋವಿಡ್-೧೯ ಸಾಂಕ್ರಾಮಿಕದಿಂದಾಗಿ ಎರಗಿ ಬಂದ ‘ಲಾಕ್ಡೌನ್’ ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ.
ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ಖಾಲಿ ಇರುವ ಸಹಸ್ರಾರು ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳುವ ಬದಲು ‘ಅತಿಥಿ’ ಎಂಬ ಪದದ ಮೂಲಕ ಕಡಿಮೆ ಸಂಬಳವನ್ನು ನೀಡಿ ನಿರುದ್ಯೋಗಿ ಯುವಜನರನ್ನು ಶೋಷಣೆ ಮಾಡುತ್ತಿದೆ. ಹೀಗಾಗಿ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಯಾವುದೇ ಜೀವನ ಭದ್ರತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದೆ.
ಇತ್ತೀಚಿಗೆ, ಮಂಡ್ಯ ಜಿಲ್ಲೆಯ ಮಳವಳ್ಳಿ ಪದವಿ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಒಂದಡೆಯಾದರೆ ಇನ್ನೊಂದೆಡೆ ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯದ ನೆಪ ಹೇಳಿ ಅತಿಥಿ ಉಪನ್ಯಾಸಕರನ್ನು/ ಶಿಕ್ಷಕರನ್ನು ಮುಂದುವರೆಸದಿರುವ ಅಥವಾ ಕೈಬಿಡುವ ಮಾತನಾಡುತ್ತಿರುವುದು ಅವರನ್ನು ಇನ್ನಷ್ಟು ಹತಾಶರನ್ನಾಗಿಸಿದೆ.
ಆ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಗಾಯದ ಮೇಲೆ ಬರೆ ಎಳೇಯುತ್ತಿದೆ. ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರು, ಉಪನ್ಯಾಸಕರನ್ನು ಇಂತಹ ಅಸಹಾಯಕ ಪರಿಸ್ಥಿತಿಗೆ ಸರ್ಕಾರವು ದೂಡಿರುವುದು ಸರಿಯಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದೆ.
ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರವು ವಿಶೇಷ ಅನುದಾನವನ್ನು ಘೋಷಿಸಬೇಕು ಹಾಗೂ ಬಾಕಿ ಇರುವ ಹಣವನ್ನು ಒಂದೇ ಬಾರಿಗೆ ಈ ಕೂಡಲೇ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು/ ಶಿಕ್ಷಕರ ಹೋರಾಟ ಸಮಿತಿ ಹಾಗೂ ಎಐಡಿವೈಒ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕ ವೃಂದದವರಿಗೂ ಸಹ ಕನಿಷ್ಠ ಪಕ್ಷ ಒಂದು ಬಾರಿಯ ಪರಿಹಾರ ಪ್ಯಾಕೇಜ್ನ್ನು ಘೋಷಿಸಬೇಕು ಎಂದು ಒತ್ತಾಯಿಸಿವೆ.
ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಯನ್ನು ಕೂಡಲೇ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಅತಿಥಿ ಉಪನ್ಯಾಸಕರು/ ಶಿಕ್ಷಕರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು