ಬೆಂಗಳೂರು prajakiran.com : ಹೊಸ ರೂಪಾಂತರಗೊಂಡ ಕೊರೊನಾ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 2ರವರೆಗೆ ವಿಧಿಸಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೀವ್ರ ವಿರೋಧದ ಬೆನ್ನಲ್ಲೇ ಕೊನೆಗೂ ಹಿಂಪಡೆದಿದೆ.
ರಾತ್ರಿ ಕರ್ಫ್ಯೂ ರಾಜ್ಯದಲ್ಲಿ ಆದೇಶದ ವಿರುದ್ದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಹಗಲಿನಲ್ಲಿ ಕೊರೊನಾ ಹರಡುವುದಿಲ್ಲವೇ ಎಂದು ರಾಜ್ಯ ಸರ್ಕಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಜನರು ಪ್ರಶ್ನಿಸಿದ್ದರು.
ಹೀಗಾಗಿ ಕೊನೆಗೂ ಎಚ್ಚೆತ್ತ ರಾಜ್ಯದ ಬಿಜೆಪಿ ಸರಕಾರ ರಾತ್ರಿ ಕರ್ಫ್ಯೂ ಅಗತ್ಯವಿಲ್ಲವೆಂದು ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿರ್ಧಾರವನ್ನು ವಾಪಾಸ್ ಪಡೆದಿದ್ದಾರೆ.
ಇನ್ನು ಜನರು ಸ್ವಯಂ ನಿರ್ಭಂಧ ವಿಧಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಅನಗತ್ಯವಾಗಿ ಸಂಚಾರ ಮಾಡದೇ, ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.