ಹುಬ್ಬಳ್ಳಿ prajakiran.com : ‘ಸಮಾಜಕ್ಕೆ ನಾವು ವಂಚನೆ ಮಾಡಿಲ್ಲ, ಮಾಡುವುದೂ ಇಲ್ಲ. ಆದರೂ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಹಿರಿಯ ಶ್ರೀಗಳ ಆಶಯ ಹಾಗೂ ಸಂಕಲ್ಪದಂತೆ ಕೆಎಲ್ಇ ಸಂಸ್ಥೆಯ ಮೆಡಿಕಲ್ ಕಾಲೇಜ್ಗೆ ಜಮೀನು ಕೊಡಲಾಗಿದೆ. ಕಾನೂನು ಪ್ರಕಾರವೇ ನೀಡಿದ್ದೇವೆ ಎಂದು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾ ಜಯೋಗೀಂದ್ರ ಶ್ರೀಗಳು ಹೇಳಿದರು.
ಮೂರು ಸಾವಿರ ಮಠ
ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ತಾವು ಅನುಭವಿಸಿದ ನೋವುಗಳನ್ನು ಹಂಚಿಕೊಂಡು ಕೆಲ ಕ್ಷಣ ಭಾವುಕರಾದರು.
ನಾನು ಅಪರಾ ತಪರಾ ಮಾಡಿದ್ದೇನೆ ಎಂದು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಮೀಡಿಯಾ ಮುಂದೆ ನಿಂತಿದ್ದರೆ, ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು. ಎಲ್ಲವೂ ನುಂಗಿಕೊಂಡು ಸುಮ್ಮನಿದ್ದುದರಿಂದ ದೊಡ್ಡವನಾಗಿದ್ದೇನೆ ಎಂದರು.
ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಯಾವುದೇ ಆಸ್ತಿ ಪರಭಾರೆ ಮಾಡಿಲ್ಲ. ಹಾಗೆ ಮಾಡಲು ಬರಲ್ಲ. ಮಠದಲ್ಲಿ 6 ಟ್ರಸ್ಟ್ ಕಮಿಟಿಗಳಿವೆ. ಎಲ್ಲ ಆಸ್ತಿಗಳು ಟ್ರಸ್ಟ್ ಕಮಿಟಿಗಳಲ್ಲಿ ಹಂಚಿಕೆ ಆಗಿವೆ. ಖರ್ಚು ವೆಚ್ಚಗಳನ್ನೆಲ್ಲ ಆಯಾ ಟ್ರಸ್ಟ್ಗಳೇ ನೋಡಿಕೊಳ್ಳುತ್ತವೆ.
ನಮಗೆ ದುಡ್ಡು ಬೇಕಾದರೂ ಅಲ್ಲಿಂದ ತೆಗೆಯಲು ಬರಲ್ಲ. ಕೈಗಡ ಎಂದು ಪಡೆದುಕೊ ಳ್ಳಬಹುದಷ್ಟೇ. ಬಳಿಕ ಆ ದುಡ್ಡನ್ನು ಅದಕ್ಕೆ ಕಟ್ಟಲೇಬೇಕು.
ಪ್ರತಿವರ್ಷ ಆಡಿಟ್ ಕೂಡ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ಶ್ರೀಗಳು ಜೀವಂತ ಇರುವಾಗಲೇ ಕೋರೆ ಹಾಗೂ ಮುನವಳ್ಳಿ ಅವರನ್ನು ಕರೆದು ಮೆಡಿಕಲ್ ಸ್ಥಾಪಿಸುವುದಕ್ಕೆ ಜಾಗ ನೀಡುತ್ತೇನೆ ಎಂದು ಭಾಷೆ ಮಾಡಿದ್ದರು.
ಅದರ ದಾನಪತ್ರವನ್ನೂ ಹಿರಿಯ ಶ್ರೀಗಳೇ ತಯಾರಿಸಿದ್ದರು. ಆಗಲೇ ನಾನು ಸಹಿ ಮಾಡಿದ್ದುಂಟು. ಜಾಗ ನೀಡಲು ಅವರಿಗೆ ಕೊಟ್ಟ ಮಾತಿನಂತೆ ಇದೀಗ ಜಾಗ ಕೊಟ್ಟಿದ್ದೇವೆ ಅಷ್ಟೇ ಎಂದರು.
ಮಠ ಬಿಟ್ಟು ಹೋದ ಸ್ವಾಮಿ ಮತ್ಯಾಕೆ ಬಂದ ಎಂದು ಬಸವರಾಜ ಹೊರಟ್ಟಿ ಕೇಳಿದಾಗ ನಾನು ನೊಂದುಕೊಳ್ಳಲಿಲ್ಲ.
ಮಠದಲ್ಲಿ ಉತ್ತರಾಧಿಕಾರಕ್ಕಾಗಿ ಇಬ್ಬರಲ್ಲಿ ಕಚ್ಚಾಟ ನಡೆದಿತ್ತು. ಶ್ರಾವಣ ಮಾಸದ ಕೈಂಕರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಉತ್ತರಾಧಿಕಾರಿ ಮಾಡದಿದ್ದರೆ ಜನ ಏನೆಂದುಕೊಂಡಾರು ಎಂದುಕೊಂಡು ಮತ್ತೆ ಮಠಕ್ಕೆ ಬಂದೆ. ಹೊರಟ್ಟಿಯವರು ವಾಸ್ತವ ತಿಳಿದು ಸಮಾಧಾನ ಮಾಡಿದರು.
ಹೊರಟ್ಟಿಯವರ ಕಂಠ ಕಠಿಣ, ಆದರೆ, ಹೃದಯಮಾತ್ರ ಮೃದು ಎಂದು ಬಣ್ಣಿಸಿದರು.ಈ ನಡುವೆ ಶ್ರೀಗಳು ಭಾವುಕರಾದಾಗ ಬಸವರಾಜ ಹೊರಟ್ಟಿ ಮತ್ತು ಶಂಕ್ರರಣ್ಣ ಮುನವಳ್ಳಿ ತಡೆಯಲು ನೋಡಿದರು. ನನಗೆ ನೋವಾಗಿದೆ, ಎಲ್ಲವನ್ನೂ ಹೇಳಬೇಕು ಎಂದು ಶ್ರೀಗಳು ಮಾತು ಮುಂದುವರಿಸಿದರು.