ರಾಜ್ಯ

ಶಾಲೆಗಳಲ್ಲಿ 6 -12 ವರ್ಷದವರೆಗಿನ ಮಕ್ಕಳಿಗೆ ಲಸಿಕಾ ಅಭಿಯಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು prajakiran. com, ಏ 27 :

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ 6 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಲಸಿಕೆಯನ್ನ ಶಾಲೆಯಲ್ಲಿ ಅಭಿಯಾನ ರೀತಿಯಲ್ಲಿ ಲಸಿಕೆ ನೀಡಲಾಗುವುದು.

15 ರಿಂದ 18 ವಯೋಮಾನದವರು ಹಾಗೂ 60 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕಾ ಲಸಿಕೆಯನ್ನು ಹೆಚ್ಚಿಸುವ ಮೂಲಕ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೋವಿಡ್ ಸ್ಥಿತಿಗತಿ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದಿನ ಸಭೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿ ಗತಿ ಬಗ್ಗೆ ವಿವರಣೆ ನೀಡಲಾಗಿದೆ. ಸದ್ಯಕ್ಕೆ ಕೋವಿಡ್ ನಿಯಂತ್ರಣದಲ್ಲಿದೆ.

ಏಪ್ರಿಲ್ 9 ರ ನಂತರ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಕೋವಿಡ್ ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ. ಪ್ರತಿದಿನ 30 ಸಾವಿರ ಪರೀಕ್ಷೆ ಗಳನ್ನು ಮಾಡುವ ಗುರಿ ಇದೆ.

ಅಂತರರಾಷ್ಟ್ರೀಯ ಪ್ರಯಾಣಿಕರ ಶೇ.2 ರಷ್ಟು ರಾಂಡಮ್ ಪರೀಕ್ಷೆ, ಟೆಲಿ ಟ್ರ್ಯಾಕಿಂಗ್ ಮಾಡಲಾಗುವುದು. ವಿಶ್ವದ 8 ದೇಶಗಳಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮಾಡಲಾಗುವುದು ಎಂದರು.

*ಆಸ್ಪತ್ರೆ ವ್ಯವಸ್ಥೆ :*
50 ಸಾವಿರಕ್ಕಿಂತ ಹೆಚ್ಚಿನ ಬೆಡ್ ವ್ಯವಸ್ಥೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಬೆಡ್ ಗಳಿವೆ. ಆಕ್ಸಿಜನ್ ದಾಸ್ತಾನು ಸಾಕಷ್ಟಿದೆ. ಕೋವಿಡ್ ನಿಯಂತ್ರಣಕ್ಕೆ ಸಕಲ ಸನ್ನದ್ಧರಾಗಿದ್ದೇವೆ ಎಂದರು.

*ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ :*
ಲಸಿಕಾ ಅಭಿಯಾನ ಕೈಗೊಳ್ಳುವುದರ ಜೊತೆಗೆ ಟ್ರ್ಯಾಕ್, ಟ್ರೇಸ್, ಟ್ರೀಟ್, ಲಸಿಕೆ ಪಾಲಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯ ಪಾಲನೆ ಆಗಬೇಕು.

ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದರು.

*ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ :*
ಪ್ರಮುಖ ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ ಕೈಗೊಳ್ಳಲಾಗುವುದು. ಲಸಿಕೆ ಅಭಿಯಾನದ ಮೂಲಕ ಕೋವಿಡ್ 3 ನೆ ಅಲೆಯನ್ನು ನಿಯಂತ್ರಿಸಲು ಸಾಧ್ಯವಾಯಿತು.

ಲಸಿಕೆ ಅಭಿಯಾನ, ಮುಂಜಾಗ್ರತಾ ಕ್ರಮಗಳ ಜೊತೆಗೆ ಆರ್ಥಿಕತೆಯೂ ಮುಂದುವರೆಯಬೇಕು. ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಇದು ಕೋವಿಡ್ ನ ಮೂರು ಅಲೆಗಳಿಂದ ಕಲಿತಿರುವ ಪಾಠ ಎಂದರು.

ರಾಜ್ಯದಲ್ಲಿ ಯಾವ ರೀತಿಯ ಕೋವಿಡ್ ನಿಯಂತ್ರಣ ಕ್ರಮಗಳು ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ಆಸ್ಪತ್ರೆಗಳಲ್ಲಿನ ರೋಗಿಗಳ ಪರೀಕ್ಷೆಯನ್ನು ನಡೆಸಿ, ಪಾಸಿಟಿವ್ ಪ್ರಕರಣಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು.

ಆಕ್ಸಿಜನ್ ಘಟಕಗಳಲ್ಲಿ 1100 ಮೆ.ಟನ್ ಸಾಮರ್ಥ್ಯಕ್ಕೆ ಹೆಚ್ಚಿಸುವ ತೀರ್ಮಾನ ಮಾಡಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೋವಿಡ್ ಸ್ಥಿತಿಗತಿಯ ಬಗ್ಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಸಭೆಯ ಮುಖ್ಯಾಂಶಗಳು:
1. ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ ಕೋವಿಡ್ ಮೂರೂ ಅಲೆಯನ್ನೂ ಸಮರ್ಥವಾಗಿ ಎದುರಿಸಲಾಗಿದೆ. ಈ ಅನುಭವದ ಮೇರೆಗೆ ನಾಲ್ಕನೇ ಅಲೆಯನ್ನೂ ಸಮರ್ಥವಾಗಿ ಎದುರಿಸುವ ಬಗ್ಗೆ ನಮಗೆ ಆತ್ಮವಿಶ್ವಾಸವಿದೆ ಹಾಗೂ ಸರ್ವರೀತಿಯಿಂದಲೂ ಸನ್ನದ್ಧರಾಗಿದ್ದೇವೆ.

2. ಏಪ್ರಿಲ್ 9 ರವರೆಗೆ ಪಾಸಿಟಿವಿಟಿ ದರ ಕಡಿಮೆ ಇತ್ತು. ನಂತರದಲ್ಲಿ 0.3 ನಿಂದ 1.38 ವರಗೆ ಹಾಗೂ ಬೆಂಗಳೂರಿನಲ್ಲಿ 0.4 ನಿಂದ 2.07 ಗೆ ಏರಿಕೆಯಾಗಿದೆ.

3. ರಾಜ್ಯದಲ್ಲಿ ಈವರೆಗೆ 1686 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕೋವಿಡ್ ನಿಂದ ಯಾವುದೇ ಸಾವು ವರದಿಯಾಗಿಲ್ಲ.

4. ಕೋವಿಡ್ ಪರೀಕ್ಷೆಗಳನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಹಾಗೂ ಇತರೆ ಜಿಲ್ಲೆಗಳಲ್ಲಿ 20 ಸಾವಿರ ಪರೀಕ್ಷೆಗಳನ್ನು ಪ್ರತಿನಿತ್ಯ ನಡೆಸಲಾಗುವುದು.

5. ವಿಮಾನನಿಲ್ದಾಣಗಳಲ್ಲಿ ದಕ್ಷಿಣ ಆಫ್ರಿಕಾ, ಥಾಯ್‍ಲ್ಯಾಂಡ್, ಇಂಡೋನೇಷ್ಯಾ, ರಷ್ಯಾ, ಚೈನಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದಿಂದ ಆಗಮಿಸುವ ಪ್ರಯಾಣಿಕರ ಪರೀಕ್ಷೆಗಳನ್ನು ಹೆಚ್ಚಿಸಿ ಟೆಲಿಟ್ಯಾಕಿಂಗ್ ಪ್ರಾರಂಭಿಸಲಾಗುವುದು.

6. ರಾಜ್ಯದಲ್ಲಿ 10 ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿದ್ದು, ಈವರೆಗೆ 8890 ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ 4449 ಪ್ರಕರಣಗಳು ಓಮಿಕ್ರಾನ್ ವೈರಾಣು ಎಂದು ಧೃಢಪಟ್ಟಿದೆ.

7. ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಚಿಕಿತ್ಸೆ ಲಭ್ಯವಿದೆ. 1,43,000 ಆಕ್ಷಿಜನ್ ಹಾಸಿಗೆಗಳು ಪ್ರಸ್ತುತ ಲಭ್ಯವಿದೆ.

8. ಈಗಾಗಲೇ ಕೋವಿಡ್ ಸೂಕ್ತ ನಡವಳಿಕೆಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

9. ಈ ಕುರಿತು ಭಾರತ ಸರ್ಕಾರ ಈಗಾಗಲೇ ನೀಡಿರುವ ನಿಯಮಗಳನ್ನು ಪಾಲಿಸಲಾಗುತ್ತಿದೆ.

10. ಕರ್ನಾಟಕ ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು, ಶೇ 98% ಜನಸಂಖ್ಯೆಗೆ ಲಸಿಕೆ ಹಾಕಲಾಗಿದೆ.

11. ಒಟ್ಟು 10.56 ಕೋಟಿ ಡೋಸ್‍ಗಳನ್ನು ಹಾಕಲಾಗಿದ್ದು, 4.98 ಕೋಟಿ ಮೊದಲ ಡೋಸ್ ಹಾಗೂ 4.80 ಕೋಟಿ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

12. ಹದಿನೈದರಿಂದ – ಹದಿನೇಳು ವಯೋಮಾನದವರಿಗೆ ಈವರೆಗೆ 50 ಲಕ್ಷ ಡೋಸ್‍ಗಳನ್ನು ಹಾಕಲಾಗಿದೆ.

13. ಶೇ. 27ರಷ್ಟು ಜನಸಂಖ್ಯೆ ಮುಂಜಾಗ್ರತಾ ಲಸಿಕೆಯನ್ನು ಪಡೆದಿದ್ದಾರೆ.

14. ರಾಜ್ಯದಲ್ಲಿ ಪ್ರಸ್ತುತ 61 ಲಕ್ಷ ಲಸಿಕೆಗಳ ದಾಸ್ತಾನು ಲಭ್ಯವಿದೆ.

15. ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

16. ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗುತ್ತಿದೆ.

17. ಕೋವಿಡ್ ನಿರ್ವಹಣೆಗಾಗಿ ರಾಜ್ಯಕ್ಕೆ ಒದಗಿಸಲಾಗಿರುವ 831 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ.

18. 1220 ಮೆಟ್ರಿಕ್ ಟನ್ ಆಕ್ಸಿಜನ್ ದಾಸ್ತಾನು ರಾಜ್ಯದಲ್ಲಿ ಲಭ್ಯವಿದೆ. 243 ಆಕ್ಸಿಜನ್ ಘಟಕಗಳ ಪೈಕಿ 242 ಆಕ್ಸಿಜನ್ ಘಟಕಗಳ ಕಾಮಗಾರಿ ಪೂರ್ಣಗೊಂಡಿವೆ.

19. ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳಿಲ್ಲದೆ, ಸಾಂಕ್ರಾಮಿಕವನ್ನು ನಿರ್ವಹಿಸಲು ಕ್ರಮ ವಹಿಸಲಾಗುವುದು.

20. ಕೋವಿಡ್ ಸಾಂಕ್ರಾಮಿಕದ ಸಂಭಾವ್ಯ 4 ನೇ ಅಲೆಯನ್ನು ಎದುರಿಸಲು ರಾಜ್ಯ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *