ಚಾಮರಾಜನಗರ prajakiran.com : ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಕೋವಿಡ್ ರೋಗಿಗಳು ಮೃತಪಟ್ಟಿರು ಘಟನೆ ನಡೆದಿದೆ.
ಭಾನುವಾರ ರಾತ್ರಿ 10:30 ರಿಂದಲೇ ಆಕ್ಸಿಜನ್ ಕೊರತೆಯಾಗಿದ್ದು, ಇದರಿಂದಾಗಿ 12 ರೋಗಿಗಳು ಮೃತಪಟ್ಟಿದ್ದಾರೆ. ಇತರ ಕಾರಣಗಳಿಂದಾಗಿ 14 ರೋಗಿಗಳು ಮೃತಪಟ್ಟಿದ್ದಾರೆ.
ಮೈಸೂರಿನಿಂದ ಆಮ್ಲಜನಕ ಪೂರೈಕೆ ಆಗುತ್ತಿತ್ತು ಆದರೆ ಮೈಸೂರು ಹೊರತುಪಡಿಸಿ ಬೇರೆಲ್ಲಿಗೂ ಆಮ್ಲಜನಕ ಪೂರೈಕೆ ಆಗಬಾರದು ಎಂದು ಗ್ಯಾಸ್ ಏಜೆನ್ಸಿ ಆದೇಶಿಸಿದ ಕಾರಣ ಸಿಲಿಂಡರ್ಗಳು ಬೇರೆಲ್ಲೂ ದೊರಕಿಲ್ಲ ಎನ್ನಲಾಗಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಬಹುಪಾಲು ಮಂದಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದ್ದಾರೆ.
ಮಧ್ಯರಾತ್ರಿ 11 ಗಂಟೆಯ ಹೊತ್ತಿಗೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಆದರೆ, 24 ಮಂದಿಯೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ.
ಈಗಾಗಲೇ, ವೈದ್ಯರು ಡೆತ್ ಆಡಿಟ್ ಮಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ರೋಗಿಗಳ ಸಾವಿನ ನಿಜ ಕಾರಣ ತಿಳಿಯಲಿದೆ ಎಂದರು.
ಮೈಸೂರಿನ ಆಕ್ಸಿಜನ್ ಪೂರೈಕೆದಾರರ ಜೊತೆಗೆ ಮಾತನಾಡಿ ಮಧ್ಯರಾತ್ರಿಯೇ ಎರಡು ಬಾರಿ ಆಮ್ಲಜನಕ ತರಿಸಿಕೊಂಡಿದ್ದೇವೆ.
ಇಂದು ಕೂಡ ಆಕ್ಸಿಜನ್ ಬರಲಿದೆ. ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಮರ್ಪಕ ಆಮ್ಲಜನಕ ಪೂರೈಕೆಯಾದರೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.