ಧಾರವಾಡ prajakiran.com : ಧಾರವಾಡದ ನುಗ್ಗಿಕೇರಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ ನಬೀಸಾಬ ಕಿಲ್ಲೇದಾರ ಅಂಗಡಿ ಮೇಲೆ ನಿನ್ನೆ ಏಕಾಎಕಿ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ.
ಅಪಾರ ಪ್ರಮಾಣದ ಹಣ್ಣನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ನಬೀಸಾಬ ಕಂಗಾಲಾಗಿ ಹೋಗಿದ್ದು, ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾನೆ.
ಈ ಘಟನೆ ನಡೆದ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ನಬೀಸಾಬ ಅಂಗಡಿ ಮೇಲಿನ ದಾಳಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು.
ಅಲ್ಲದೆ, ಹತ್ತು ಸಾವಿರ ರೂಪಾಯಿ ಸಹಾಯ ಧನ ನೀಡಿ ಮಾನವಿಯತೆ ಮೆರೆದರು.
ನಬೀಸಾಬ ಭೇಟಿ ಮಾಡಿ ಧೈರ್ಯ ತುಂಬಿದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಹಾಗೂ ಪ್ರಜಾಕಿರಣ.ಕಾಮ್ ಸಂಪಾದಕರಾದ ನಾಗರಾಜ ಕಿರಣಗಿ ಧನ ಸಹಾಯ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಸಮಾಧಾನ ಹೇಳಿದರು.
ನಬೀಸಾಬ ಮಾತನಾಡಿ, ದೈವವೇ ದೇವರು. ಆಂಜನೇಯ ಸ್ವಾಮಿ ನಂಬಿ ನಾನು ಬದುಕಿದ್ದೇನೆ. ಅವನು ನನ್ನ ಕೈ ಬಿಡಲ್ಲ. ಅವನೇ ನಿಮ್ಮನ್ನು ಕಳುಹಿಸಿದ್ದಾನೆ ಎಂದು ಕೈ ಮುಗಿದು ನಮಿಸಿದ ಘಟನೆ ಎಲ್ಲರ ಕರಳು ಚುರ್ ಎನಿಸುವಂತೆ ಮಾಡಿತು.