ಧಾರವಾಡ prajakiran.com : ಮಧ್ಯರಾತ್ರಿ ಮೂರು ಗುಂಡು ಹಾರಿಸಿ ಮೂವರನ್ನು ಕೊಲ್ಲಲು ಯತ್ನಿಸಿದ್ದ ಆರೋಪಿಯನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಶ್ರೀಶೈಲ್ ಮಡಿವಾಳಪ್ಪ ಗಾಣಗೇರಅಲಿಯಾಸ್ ಶಿರೂರ (ಡಬಲ್ ಗೋಡಾ) ಎಂದು ಗುರುತಿಸಲಾಗಿದೆ. ಬಂಧಿತನಿಂದ ಕೊಲೆಗೆ ಬಳಸಿದ್ದ ಒಂದು ರಿವಾಲ್ವರ್ ಹಾಗೂ ದ್ವಿಚಕ್ರವಾಹನವನ್ನು ಜಪ್ತ ಮಾಡಲಾಗಿದೆ.
ಈತ ಗುಂಡಿನ ದಾಳಿ ನಡೆಸಿದ ನಂತರ ಪರಾರಿಯಾಗಿದ್ದ. ಈತನನ್ನು ಬಂಧಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ಅವರು ಧಾರವಾಡ ಎಸಿಪಿ ಜಿ. ಅನುಷಾ ನೇತೃತ್ವದಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ರೀಧರ ಸಾತಾರೆ, ಎ ಎಸ್ ಐ ಗಳಾದ ಶಿವಾಜಿ ಸಾಳುಂಕೆ, ಮಹೇಶ ಕುರ್ತಕೋಟಿ ಹಾಗೂ ಸಿಬ್ಬಂದಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಧಾರವಾಡ ಶಹರ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ಈ ಗುಂಡಿನ ದಾಳಿಯಲ್ಲಿ ಶಿವಯೋಗಿ ಬಾವಿಕಟ್ಟಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಈರಪ್ಪ ಯಂಗಳ್ಳಿ ಹಾಗೂ ಸುನೀಲ್ ಕೋನನ್ನವರ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಿಂದಾಗಿ ಧಾರವಾಡದ ಮದಿಹಾಳ ಹಾಗೂ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಬೆಚ್ಚಿಬಿದ್ದಿದ್ದರು.
ಆಸ್ತಿ ವಿವಾದದ ಹಿನ್ನಲೆಯಲ್ಲಿ ಈ ಮೂವರ ಮೇಲೆ ಹಳೆಯ ದ್ವೇಷವಿತ್ತು. ಹೀಗಾಗಿ ಮಾವ ಶ್ರೀಶೈಲ್ ಎಂ.ಜಿ. ಅಳಿಯ ಶಿವಯೋಗಿ ಬಾವಿಕಟ್ಟಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಶ್ರೀಶೈಲ್ ಬಳಿ ಪರವಾನಿಗೆ ಹೊಂದಿದ ರಿವಾಲ್ವರ್ ಇತ್ತು.
ಮಾವ ಶ್ರೀಶೈಲ್ ನನ್ನು ಅಳಿಯ ಶಿವಯೋಗಿ ಬೆದರಿಸಲು ಬಂದಾಗ ತಿರುಗಿಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು 24ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ, ನವಲಗುಂದದಲ್ಲಿ ಅಡಗಿ ಕುಳಿತಿದ್ದ ಶ್ರೀಶೈಲ್ ಗಾಣಿಗೇರ್ ಅಲಿಯಾಸ್ ಶಿರೂರನನ್ನು ಅರೆಸ್ಟ್ ಮಾಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಧಾರವಾಡ ಶಹರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.