ಧಾರವಾಡ prajakiran.com : ಮೀಟರ್ ಬಡ್ಡಿ ಸಾಲದ ಕಿರುಕುಳದಿಂದ ಬೇಸತ್ತು ಧಾರವಾಡದ ಯುವಕನೊಬ್ಬ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಧಾರವಾಡದ ಸಂಪಿಗೆ ನಗರದ ನಿವಾಸಿಯಾಗಿದ್ದ
ವಿಜಯ ಅಣ್ಣಪ್ಪ ನಾಗನೂರ(39) ಎಂಬಾತನೇ ನೇಣಿಗೆ ಶರಣಾದವ.
ಈತ ಲಕ್ಷ್ಮೀಸಿಂಗನಕೇರಿಯ ಶಿವರಾಜ ಮಾಕಡವಾಲೆ ಹಾಗೂ ಶಿವರಾಜ ಕೊರವರ ಎಂಬುವರಿಂದ ಮೀಟರ್
ಬಡ್ಡಿ ರೂಪದಲ್ಲಿ ಹಣವನ್ನು ಸಾಲವಾಗಿ ಪಡೆದಿದ್ದ.
ನಂತರ ವಿಜಯ ನಾಗನೂರ ಹೆಚ್ಚು ಹೆಚ್ಚು ಹಣವನ್ನು ಶಿವರಾಜ ಮಾಕಡವಾಲೆಗೆ ಮರಳಿ ಕೊಟ್ಡಿದ್ದ.
ಆದರೂ ಸಾಲ ತೀರಿಲ್ಲ ಎಂದು ಶಿವರಾಜ ಮಾಕಡವಾಲೆ ಹಾಗೂ ಶಿವರಾಜ ಕೊರವ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ವಿಜಯ ನಿನ್ನೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಲ್ಲದೆ, ಈ ಕುರಿತು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಅನಧಿಕೃತವಾಗಿ ಮೀಟರ್
ಬಡ್ಡಿ ಸಾಲವನ್ನು ಕೊಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಧಾರವಾಡದ ಉಪನಗರ ಪೊಲೀಸರು ಶಿವರಾಜ ಮಾಕಡವಾಲೆಯನ್ನು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ನ್ಯಾಯಾಲಯದ ಮುಂದೆ ಮಾಕಡವಾಲೆಯನ್ನು ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ
ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಮೇಶ ಹೂಗಾರ, ಪಿಎಸ್ ಐ ಶ್ರೀಮಂತ ಹುಣಸಿಕಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಹಿಂದೆ ಕೊಲೆ ಪ್ರಕರಣದಲ್ಲಿ ಕೂಡ ಶಿವರಾಜ ಮಾಕಡವಾಲೆ ಆರೋಪಿಯಾಗಿದ್ದ.
ಈತನ ಬಳಿ ಮೀಟರ್ ಬಡ್ಡಿ ದಂಧೆಯ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.