ಧಾರವಾಡ prajakiran.com : ಕರೋನಾ ಹಾವಳಿಯಿಂದ ಶಾಲೆಗಳಿಗೆ ರಜೆ ಇದ್ದುದರಿಂದ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯ ೯ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದಿವ್ಯಾ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಲೇ ತನ್ನ ೩ನೇ ತರಗತಿಯ ತಂಗಿಗೆ ನಿತ್ಯವೂ ಪಾಠ ಬೋಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ ಸಿಸ್ಲೆಪ್–ಕರ್ನಾಟಕ ನಿರ್ದೇಶಕ ಬಿ. ಎಸ್. ರಘುವೀರ್ ತಮ್ಮ ಕಚೇರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯದಲ್ಲಿ ಈ ದೃಶ್ಯವನ್ನು ಕಂಡು ಕೆಳಗಿಳಿದು ವಿದ್ಯಾರ್ಥಿನಿಯರನ್ನು ಮಾತನಾಡಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ದಿವ್ಯಾಳ ಪಾಠಬೋಧನೆಯ ವಿಧಾನವನ್ನು ಮೆಚ್ಚಿಕೊಂಡು ಕೆಲಕಾಲ ಪಾಠ ಬೋಧನೆಯನ್ನು ಕೂಡ ವೀಕ್ಷಿಸಿ ಪೂರಕ ಸಲಹೆಗಳನ್ನು ನೀಡಿದ್ದಾರೆ.
ಬಡತನದ ನಡುವೆಯೂ ತಾನೂ ಕಲಿತು ತನ್ನ ತಂಗಿಯೂ ವಿದ್ಯಾವಂತಳಾಗಿ ಉನ್ನತ ದರ್ಜೆಗೆ ಹೋಗಬೇಕೆಂಬ ದಿವ್ಯಾಳ ಹೆಬ್ಬಯಕೆಯನ್ನು ಸಿಸ್ಲೆಪ್ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ.
“ನಾವು ಮಾಧ್ಯಮದಲ್ಲಿ ಆನ್ಲೈನ್ ಪಾಠಗಳ ಕುರಿತು ಅಲ್ಲಿ ಮೂಡಿ ಬರುವ ಲೈವ್ ವಿಚಾರಗಳ ಬಗ್ಗೆ ಮಾತನಾಡುತ್ತೇವೆ.
ಆದರೆ ಈ ವಿದ್ಯಾರ್ಥಿನಿ ರಸ್ತೆ ಬದಿಯಲ್ಲಿಯೇ ನಿತ್ಯವೂ ತನ್ನ ತಂಗಿಗೆ ತರಕಾರಿ ಮಾರಾಟ ಮಾಡುತ್ತಲೇ ಪಾಠ ಹೇಳಿಕೊಡುತ್ತಿರುವುದು ನಿಜವಾದ ಆನ್ಲೈನ್ ಪಾಠ ಇತರರಿಗೆ ಮಾದರಿಯಾಗಿದೆ.
ಮನಸ್ಸು ಧನಾತ್ಮಕ ನೆಲೆಯಲ್ಲಿ ಆಲೋಚಿಸಿ, ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲ ಕುಂದು–ಕೊರತೆಗಳನ್ನು ನೀಗಿ ಪ್ರಯತ್ನಗಳನ್ನು ನಿರಂತರ ಮುನ್ನಡೆಸಿದಾಗ ಯಶಸ್ಸು ಲಭಿಸುತ್ತದೆ.
ಈ ನಿಟ್ಟಿನಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಿವ್ಯಾಳ ಪ್ರಯತ್ನಕ್ಕೆ ವ್ಯಾಪಕ ಪ್ರತಿಫಲ ಲಭಿಸಲಿ ಎಂದು ನಾವು ಶುಭ ಹಾರೈಸೋಣ.