ನವದೆಹಲಿ prajakiran.com : ರಾಜ್ಯ ರಾಜಕೀಯದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ಸಿಎಂ ಆಗಿರ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಅವರು ಬುಧವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಿಗೆ ಭೇಟಿಯಾಗಿ ಸಿಹಿ ಕೊಟ್ಟು ಅಭಿನಂದಿಸಿದ್ದೇನೆ. ಇದರಲ್ಲಿ ಯಾವುದೇ ಮಹತ್ವದ ರಾಜಕೀಯ ಬೆಳವಣಿಗೆಗಳಿಲ್ಲ ಎಂದು ತೇಪೆ ಹಾಕಿದರು.
ನಾನು ನನ್ನ ಇಲಾಖೆ ಕೆಲಸಕ್ಕೆ ಬಂದಿದ್ದೇನೆ. ಸಾರಿಗೆ ಇಲಾಖೆಯ ನಿರ್ಭಯ ಯೋಜನೆಗೆಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಅಲ್ಲದೆ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಯಾರೊ ನಮ್ಮ ಒಬ್ಬಅಭಿಮಾನಿ ಪೋಸ್ಟ್ ಮಾಡಿದ್ದಾನೆ. ಅಂತಹ ಯಾವುದೇ ಬೆಳವಣಿಗೆಗಳು ಇಲ್ಲ. ಎಲ್ಲಾ ಉಹಾಪೋಹ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸಮಜಾಯಿಸಿ ನೀಡಿದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿಯೇ ಮುಂದುವರೆಯಲಿದೆ.
ನಾನು ರಾಜ್ಯಪಾಲರ ಆರೋಗ್ಯ ವಿಚಾರಣೆ ಬಳಿಕ ದೆಹಲಿಗೆ ಬಂದಿರುವುದು ಇಲಾಖೆ ಕೆಲಸ ಕಾರ್ಯಗಳಿಗೆ ಹೊರತು ವೈಯಕ್ತಿಕವಾಗಿ ಯಾರನ್ನು ಭೇಟಿ ಮಾಡಲು ಬಂದಿಲ್ಲ.
ಇದು ತಾಕತಾಳೀಯವಷ್ಟೇ. ರಾಜ್ಯ ಸರಕಾರದ ಪರವಾಗಿ ನಾನು ಎಲ್ಲಿಯೇ ಹೋದರೂ ಸಿಹಿ, ಫಲಪುಷ್ಪ ಕೊಡುವುದು ಗೌರವದ ಸಂಕೇತ ಎಂದು ಹೇಳಿದರು.
ಹಾಗಿದ್ದರೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬಿ ಎಸ್ ವೈ ನೇತೃತ್ವದ ಬಿಜೆಪಿ ಸರಕಾರ ಒಂದು ಸರಕಾರದಅವಧಿ ಪೂರೈಸಿರುವ ಮಾಹಿತಿ ಗೊತ್ತಿರಲಿಲ್ಲವೇ,
ಒಂದು ಟ್ವೀಟ್ ಕೂಡ ಮಾಡದೆ ಅವರನ್ನು ಅಭಿನಂದಿಸದಿರುವುದು ಯಾಕೆ. ರಾಷ್ಟ್ರೀಯ ಬಿಜೆಪಿ ನಾಯಕರ ಮೌನವನ್ನು ಗಮನಿಸಿದರೆ ಬಿಜೆಪಿಯ ಹೈಕಮಾಂಡ್ ನಲ್ಲಿ ಎಲ್ಲವೂ ಸರಿಯಿದೆ ಎಂದು ಅನಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.