ನವದೆಹಲಿ prajakiran.com : ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.
ಬಿಜೆಪಿ ಸೇರಲು ಪ್ರಮುಖ ಕಾರಣ ಪಕ್ಷ ಸಾಮಾನ್ಯ ಜನರೊಂದಿಗೆ ನಿಲ್ಲುತ್ತದೆ ಎಂಬ ವಿಶ್ವಾಸವಿದೆ. ಜೊತೆಗೆ ದೇಶದಲ್ಲಿ ಹೊಸ ಬದಲಾವಣೆ ತಂದಿದೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಸೇರ್ಪಡೆಗೊಂಡಿದ್ದೇನೆ. ಅಲ್ಲದೆ, ರಾಜಕೀಯದಲ್ಲಿ ಯುವಕರಅವಶ್ಯಕತೆ ಇದೆ ಎಂಬುದನ್ನು ಮನಗಂಡು ಸೇರಿದ್ದೇನೆ ಎಂದರು.
ಪೊಲೀಸ್ ಕಾರ್ಯವೈಖರಿ ಬೇರೆ, ನೀತಿ ನಿಯಮಗಳ ವಿಷಯ ಬಂದಾಗ ರಾಜಕೀಯ ಸೇರುವುದು ಅನಿವಾರ್ಯ ವಾಗಿತ್ತು. ಸಾಮಾಜಿಕ ವ್ಯವಸ್ಥೆ ಬದಲಾವಣೆಗಾಗಿ ಬಿಜೆಪಿಯೇ ಆಯ್ಕೆ ಮಾಡಿಕೊಂಡಿದ್ದೇನೆ. ಈ ಪಕ್ಷದಲ್ಲಿ ಒಳ್ಳೆಯ ನಿರ್ಧಾರ ಗಳಿಗೆ ಹಾಗೂ ಜನಸಾಮಾನ್ಯರ ಮಾತುಗಳಿಗೆ ಮನ್ನಣೆ ದೊರೆಯುತ್ತದೆ ಎಂದರು.
ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಸ್ವಲ್ಪಸಮಯಬೇಕಾಗುತ್ತದೆ. ಜನ ಹೊಸ ಆಲೋಚನೆಯಲ್ಲಿ ಬದಲಾವಣೆ ಬಯಸುತ್ತಿದ್ದಾರೆ.
ಬಿಜೆಪಿ ಐದು ವರ್ಷದಲ್ಲಿ ಆಡಳಿತಕ್ಕೆ ಬಂದೇ ಬರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ಹಿಂದೆ ಚಿಕ್ಕಮಗಳೂರು ಸೇರಿ ಹಲವಡೆ ಕೆಲಸ ಮಾಡಿದ ಸಂದರ್ಭದಲ್ಲಿ ಹಿಂದೂಗಳ ಪರವಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇಂತಹ ಆರೋಪ ಇದ್ದೆ ಇರುತ್ತದೆ. ಇಲಾಖೆಯಲ್ಲಿದ್ದಾಗ ನಾನು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಅಂತ ಭೇದಭಾವ ಮಾಡಿಲ್ಲ.
ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿದ್ದೇನೆ. ತಪ್ಪಿತಸ್ಥರು ಯಾವುದೇ ಸಮಾಜದವರಿದ್ದರೂ ಕ್ರಮ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.