ಬೆಂಗಳೂರು prajakiran.com : ಒಂದು ತಿಂಗಳ ಹಿಂದೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಆತನ ಶವ ನೀಡಲು 18 ಲಕ್ಷಬಿಲ್ ಪಾವತಿಸಿ ಎಂದು ಖಾಸಗಿ ಆಸ್ಪತ್ರೆಯೊಂದು ಹೇಳಿದ ಘಟನೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದಿದೆ.
ಇದರಿಂದಾಗಿ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆ ಸಿಬ್ಭಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡು ಪರಿಸ್ಥಿತಿ ನಿಭಾಯಿಸಲು ಹರಸಾಹಸ ನಡೆಸಬೇಕಾಯಿತು.
ಮೂರು ಬಾರಿ ಕರೋನಾ ನೆಗೆಟಿವ್ ಬಂದರೂ ಈಗ ಪಾಸಿಟಿವ್ ಎಂದು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೋವಿಡ್ ಸಂದರ್ಭವನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗ ಮಾಡಿಕೊಂಡು ಹಣ ಮಾಡುತ್ತಿವೆ ಎಂದು ಸ್ಥಳೀಯರು ಆಪಾದಿಸಿದರು.
ಹಣ ಪಾವತಿಸಿ ಶವ ಪಡೆಯಲು ಷರತ್ತು ವಿಧಿಸಿರುವುದು ನೊಡಿದರೆ ಮಾನವೀಯತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಕಿಡಿಕಾರಿದರು. ಯುವಕ ಸಾವನ್ನಪ್ಪಿದ್ದರಿಂದ ಆಸ್ಪತ್ರೆ ಎದುರು ಹೈಡ್ರಾಮಾವೇ ನಡೆಯಿತು.
ಡಾಕ್ಟರ್ ಗಳು ಆಸ್ಪತ್ರೆಯವರು ಬೌನ್ಸರ್ ಇಟ್ಟುಕೊಂಡು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಅವರ ಸಂಬಂಧಿಕರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಮಾಧ್ಯಮಗಳನ್ನು ಕಂಡು ಆಸ್ಪತ್ರೆ ಶವ ಹಸ್ತಾಂತರಿಸಿದೆ.