ಮದುವೆ ಮನೆಗಳೇ ಇವರ ಟಾರ್ಗೆಟ್-ವಜ್ರ ಮಿಶ್ರಿತ ಚಿನ್ನ ದೋಚಿದ್ದ ಅಂತರಾಜ್ಯ ಆರೋಪಿ ಅರೆಸ್ಟ್
*ಒಂದು ಸಿಸಿಟಿವಿ ದೃಶ್ಯಾವಳಿ ಇಟ್ಟುಕೊಂಡು ಮುಂಬೈ, ಭೋಪಾಲ್, ಇಂದೋರ್, ಗುಜರಾತ್, ಅಹ್ಮದಾಬಾದ್, ಮಧ್ಯಪ್ರದೇಶದಲ್ಲಿ ತನಿಖೆ ನಡೆಸಿದ ಧಾರವಾಡದ ವಿದ್ಯಾಗಿರಿ ಪೊಲೀಸರು*
*61.14 ಲಕ್ಷ ವಜ್ರ ಮಿಶ್ರಿತ ಚಿನ್ನಾಭರಣಗಳ ಬ್ಯಾಗ್ ವಿದ್ಯಾಗಿರಿ ಪೊಲೀಸ್ ವಶಕ್ಕೆ*
*ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್ ಬಗ್ಗೆ ಎಚ್ಚರ*
ಧಾರವಾಡ ಪ್ರಜಾಕಿರಣ.ಕಾಮ್ : ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ, ಬೀಗರಂತೆ ಮದುವೆಗೆ ಬಂದು ಮದುವೆ ಮನೆಯಲ್ಲಿನ ಚಿನ್ನಾಭರಣಗಳನ್ನು ಯಾರಿಗೂ ಗೊತ್ತಾಗದಂತೆ ದೋಚಿಕೊಂಡು ಹೋಗುತ್ತಿದ್ದ ಅಂತರರಾಜ್ಯ ಕಳ್ಳರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಧಾರವಾಡದ ದಿ ಓಶಿಯನ್ ಪರ್ಲ್ ರೆಸಾರ್ಟ್ನ ಪೆಶಿಫಿಕ್ ಕನ್ವೆನ್ನನ್ ಹಾಲ್ನಲ್ಲಿ ನಡೆದ ಹುಬ್ಬಳ್ಳಿ ಅಧ್ಯಾಪಕ ನಗರದ ನಿವಾಸಿ ಅರುಣಕುಮಾರ ಗಿರಿಯಾಪುರ ಅವರ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಈ ತಂಡ ವಜ್ರ ಮಿಶ್ರಿತ ಚಿನ್ನಾಭರಣಗಳ ಬ್ಯಾಗ್ನ್ನು ಕದ್ದೊಯ್ದಿತ್ತು.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.
ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ವಿದ್ಯಾಗಿರಿ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು.
ದೂರು ದಾಖಲಾದ ಕೇವಲ 10 ದಿನಗಳ ಅವಧಿಯಲ್ಲೇ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಇಂದೋರ್ನ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನ ಬಂಧಿಸಿದ್ದಾರೆ.
ಈ ಬಾಲಕ ಧಾರವಾಡದಲ್ಲಿ ನಡೆದಿದ್ದ ಕಳ್ಳತನದಲ್ಲಿ ಭಾಗಿಯಾಗಿದ್ದ. ಬಂಧಿತನಿಂದ 61,14,000 ರೂಪಾಯಿ ಮೌಲ್ಯದ
ವಜ್ರ ಮಿಶ್ರಿತ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಅದರ ಜೊತೆಗೆ ಪ್ರಕರಣಕ್ಕೆ ಬಳಿಸಿದ ಒಂದು ಕಾರನ್ನೂ ವಶಕ್ಕೆ ಪಡೆಯಲಾಗಿದೆ.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 3 ಜನ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ವಶಕ್ಕೆ ಪಡೆಯಬೇಕಾಗಿದೆ.
ಸದ್ಯ ವಶಕ್ಕೆ ಪಡೆದಿರುವ ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿಯಿಂದ ಮಾಹಿತಿ ಕಲೆ ಹಾಕಿ ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಈ ತಂಡ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಕೆಲವೊಂದಿಷ್ಟು ಹುಡುಗರನ್ನು ಕರೆದುಕೊಂಡು ಅವರ ಕುಟುಂಬಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ದುಡ್ಡು ಕೊಟ್ಟು ಈ ರೀತಿಯ ಕೃತ್ಯ ಮಾಡುತ್ತಾರೆ.
ಇವರು ತಮ್ಮ ತಂಡಕ್ಕೆ ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್ ಎಂದು ಹೆಸರಿಟ್ಟುಕೊಂಡಿದ್ದಾರೆ.
ಒಂದೇ ಒಂದು ಸಿಸಿಟಿವಿ ದೃಶ್ಯಾವಳಿ ಇಟ್ಟುಕೊಂಡು ಮುಂಬೈ, ಭೋಪಾಲ್, ಇಂದೋರ್, ಗುಜರಾತ್, ಅಹ್ಮದಾಬಾದ್, ಮಧ್ಯಪ್ರದೇಶದಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಬೇಧಿಸಲಾಗಿದೆ.
ಈ ಪ್ರಕರಣವನ್ನು ಬೇಧಿಸಿದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ಅವರ ತಂಡಕ್ಕೆ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ನಗದು ಬಹುಮಾನ ಘೋಷಿಸಿದ್ದಾರೆ.