ಧಾರವಾಡ prajakiran. com : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರೋಧಿಸಿ ದೈಹಿಕ ಪರೀಕ್ಷೆ ಪಾಸಾದ ಸೇನಾ ಅಭ್ಯರ್ಥಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಲಾಠಿ ಚಾರ್ಜ್ ಮಾಡಿದ ಘಟನೆ ನಡೆಯಿತು.
ನಗರದ ಹಳೇ ಡಿವೈಎಸ್ಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಸುಮಾರು 200 ರಿಂದ 250 ಜನ ಯುವಕರ ಗುಂಪು ಪ್ರತಿಭಟನಾ ಮೆರವಣಿಗೆ ನಡೆಸುತ್ತಿತ್ತು .
ಆದರೆ , ಇದಕ್ಕೆ ಪೊಲೀಸರು ಅವಕಾಶ ನೀಡದೇ ಇದ್ದುದ್ದರಿಂದ ಯುವಕರು ಹಾಗೂ ಪೊಲೀಸರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಲಾಠಿ ಚಾರ್ಜ್ಗೆ ಕಾರಣವಾಯಿತು ಎಂದು ತಿಳಿದುಬಂದಿದೆ.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತ ಯುವಕರು ದಿಕ್ಕಾಪಾಲಾಗಿ ಓಡಾಡಲಾರಂಭಿಸಿದರು.
ಪೊಲೀಸರು ಕೂಡ ಅವರ ಬೆನ್ನು ಹತ್ತಿ ಲಾಠಿ ಬೀಸಲಾರಂಭಿಸಿದರು . ಹಳೇ ಡಿವೈಎಸ್ಪಿ ವೃತ್ತದಿಂದ ಯುವಕರು ಮಹಾನಗರ ಪಾಲಿಕೆವರೆಗೂ ಓಡಿ ಬಂದರು .
ಪೊಲೀಸರು ಕೂಡ ಲಾಠಿ ಬೀಸುತ್ತಲೇ ಅವರ ಬೆನ್ನು ಹತ್ತಿದ್ದರು. ಒಂದು ಹಂತಕ್ಕೆ ಪರಿಸ್ಥಿತಿ ಉದ್ವಿಗ್ನ ಸ್ವರೂಪ ಪಡೆದುಕೊಳ್ಳುವಂತಾಗಿತ್ತು.
ಯುವಕರು ಖಾಸಗಿ ಬಸ್ ಒಂದಕ್ಕೆ ಕಲ್ಲು ತೂರಾಟ ಕೂಡ ನಡೆಸಿದರು. ಪೊಲೀಸರು ಪ್ರತಿಭಟನಾ ನಿರತ ಯುವಕರನ್ನು ಎಷ್ಟೇ ಮನವೊಲಿಸಿದರೂ ಕೇಳದ ಅವರು , ಪೊಲೀಸರ ಜೊತೆಗೆ ತೀವ್ರ ವಾಗ್ವಾದಕ್ಕಿಳಿದಿದ್ದರಿಂದ ಈ ಗೊಂದಲ ಉಂಟಾಯಿತು.
ಬಳಿಕ ಪರಿಸ್ಥಿತಿಯನ್ನು ಪೊಲೀಸರು ಶಾಂತಗೊಳಿಸಿದ್ದು ಪ್ರತಿಭಟನಾಕಾರರು ಬೇರೆ ಬೇರೆಯಾಗಿ ಚದುರಿ ಹೋಗಿದ್ದು. ಕೆಲ ಪ್ರತಿಭಟನೆಕಾರರನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧೆಡೆ ಸಾಕಷ್ಟು ಪೊಲೀಸ್ ಬಂದೊಬಸ್ತ ನಿಯೋಜನೆ ಮಾಡಲಾಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿಲ್ಲ ಎಂದು ಹೇಳಲಾಗುತ್ತದೆ.
ಬಂಧಿತರನ್ನು ಹುಬ್ಬಳ್ಳಿಯ ಹೊಸ ಸಿ ಆರ್ ಮೈದಾನಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಗೊತ್ತಾಗಿದೆ.