ನವದೆಹಲಿ prajakiran.com : ಭಾರತ ಚೀನಾ ಗಡಿ ರೇಖೆಯಲ್ಲಿನ ಸಂಘರ್ಷ 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ತಾರಕಕ್ಕೇರಿದ್ದು, ರಕ್ತದ ಕಲೆ ಹರಿದಿದೆ.
ಪೂರ್ವ ಲಡಾಕನ ಗಲ್ವಾನ್ ಕಣಿವೆ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್, ಹವಾಲ್ದಾರ್ ಸೇರಿ 20 ಯೋಧರು ಸಾವನ್ನಪ್ಪಿದ್ದಾರೆ.
ಮುಖಾಮುಖಿಯಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಪರಸ್ಪರ ಕೈ ಕೈ ಮಿಲಾಯಿಸುವ ವೇಳೆ ಗುಂಡು ಹಾರಿವೆ ಎಂದು ಭಾರತೀಯ ಸೇನೆಯ ಹಿರಿಯಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದರಲ್ಲೂ ಭಾರತೀಯ ಸೇನೆಯ ಕಮಾಂಡಿಗ್ ಅಧಿಕಾರಿ ಸೇರಿ ಬರೋಬ್ಬರಿ ಇಪ್ಪತ್ತು ಯೋಧರು ಚೀನಾದ ಸೈನಿಕರ ಜೊತೆಗೆ ಸೋಮವಾರ ರಾತ್ರಿ ನಡೆದ ಕಾದಾಟದಲ್ಲಿ ಹುತಾತ್ಮರಾಗಿರುವುದು ದೇಶವನ್ನೇ ಮರುಗುವಂತೆ ಮಾಡಿದೆ.
ಬಿಹಾರ ರೆಜಿಮೆಂಟ್ ನ ಕರ್ನಲ್ ಬಿ. ಸಂತೋಷ ಬಾಬು, ತಮಿಳುನಾಡಿನ ಯೋಧರಾದ ಹವಾಲ್ದಾರ್ ಪಳನಿ, ಜಾರ್ಖಂಡ್ ಮೂಲದ ಸಿಪಾಯಿ ಓಝಾ ಸ್ಥಳದಲ್ಲಿಯೇ ಹುತಾತ್ಮರಾಗಿದ್ದಾರೆ.
ಇನ್ನುಳಿದ 17 ಗಾಯಾಳು ಯೋಧರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಎರಡು ದೇಶಗಳ ಸೇನೆಯ ಹಿರಿಯಅಧಿಕಾರಿಗಳು ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ಮಾತುಕತೆ ಆರಂಭಿಸಿದ್ದಾರೆ ಎಂದು ಸೇನೆಯ ಹೇಳಿಕೆಯೂ ತಿಳಿಸಿದೆ.
ಮೇ 9ರಂದು ಕೂಡ ಎರಡು ಸೇನೆಯ ಯೋಧರ ನಡುವೆ ಸಂಘರ್ಷ ನಡೆದಿತ್ತು. ಸಿಕ್ಕಿಂನ ನಕು-ಲಾ ಎಂಬಲ್ಲಿ ನಡೆದ ಮುಖಾಮುಖಿಯಲ್ಲಿ ಎರಡು ಕಡೆಯ ಸೈನಿಕರು ಗಾಯಗೊಂಡಿದ್ದರು.
ಈ ಮುಖಾಮುಖಿಯಲ್ಲಿ ಕೈ ಕೈ ಮಿಲಾಯಿಸುವ ಹಾಗೂ ಕಲ್ಲೆಸೆತಕ್ಕೆ ಸೀಮಿತಗೊಂಡಿತ್ತು.
ಕಳೆದ ಹಲವು ದಶಕಗಳಿಂದ ಗಲ್ವನ್ ಕಣಿವೆಯ ವಿಚಾರದಲ್ಲಿ ಯಾವುದೇ ವಿವಾದ ಇರಲಿಲ್ಲ. ಚೀನಾ ತಕರಾರು ಕೂಡ ತೆಗೆದಿರಲಿಲ್ಲ. 1975ರಲ್ಲಿ ಚೀನಾ ಸೈನಿಕರು ಅರುಣಾಚಲ ಪ್ರದೇಶದಲ್ಲಿ ನಾಲ್ವರು ಯೋಧರನ್ನು ಕೊಂದಿದ್ದರು.