ಧಾರವಾಡ prajakiran.com : ಧಾರವಾಡ ಕೇಂದ್ರ ಕಾರಾಗೃಹದಲ್ಲಿ 2010ರ ಮೇ 23 ರಂದು ಕೆಲ ಖೈದಿಗಳು ಗಾಂಜಾ ಹಾಗೂ ಇತರೇ ನಿಷೇಧಿತ ವಸ್ತುಗಳನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಅಂದಿನ ಧಾರವಾಡ ಶಹರದ ಸಹಾಯಕ ಪೊಲೀಸ ಆಯುಕ್ತ ಸಂಜೀವ ಪಾಟೀಲ, ಪೊಲೀಸ್ ಇನ್ಸಪೆಕ್ಟರ್ ವಿಜಯ ಬಿರಾದಾರ ಹಾಗೂ ಸಿಬ್ಬಂದಿಗಳಾದ ಎಸ್.ಎಚ್ ದೊಟಿಕಲ, ವಿ.ಪಿ.ಕಿಲ್ಲೆದಾರ, ಎಸ್.ಐ. ಲಮಾಣಿ, ಸುರೇಶ ರಾಣೆಬೆನ್ನೂರ ಹಾಗೂ ಇತರರು ದಾಳಿ ನಡೆಸಿದಾಗ ಅವರ ಮೇಲೆ ರೊಚ್ಚಿಗೆದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಶಿಕ್ಷೆ ವಿಧಿಸಿ, ಅಂತಿಮ ತೀರ್ಪು ಕಾಯ್ದಿರಿಸಲಾಗಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಪಂಚಾಕ್ಷರಿ.ಎಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಶಿಕ್ಷೆಯ ಪ್ರಮಾಣವನ್ನು ಜು. 30 ರಂದು ಪ್ರಕಟಿಸಲಿದ್ದಾರೆ.
ಆರೋಪಿ ಎ 1) ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ, ಎ 2) ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ, ಮತ್ತುಆರೋಪಿ ನಂ 3) ಮುನಿರಾಜು ತಂದೆ ಹನಮಂತರಾಯಪ್ಪ, ಎ 5 ನೇ ಆರೋಪಿ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ ಗೆ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕೀಯರಾದ ಗಿರಿಜಾ ತಮ್ಮಿನಾಳ ಹಾಗೂ ಸರೋಜಾ ಹೊಸಮನಿ ವಾದ ಮಂಡಿಸಿದ್ದರು.
ಪ್ರಕರಣದ ವಿವರ :
ಸಜಾ ಬಂಧಿಯಾದ 1 ನೇ ಆರೋಪಿ ಮುಂಬೈ ಮೂಲದ ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ (38), ವಿಚಾರಣಾ ಬಂಧಿಗಳಾದ ಆರೋಪಿ ನಂ.2 ಬೆತ್ತನಗೇರಿ ಮೂಲದ ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ (28 ), ಆರೋಪಿ ನಂ 3 ಮುನಿರಾಜು ತಂದೆ ಹನಮಂತರಾಯಪ್ಪ (24 ) ಆರೋಪಿತರು ತಮ್ಮ ಕೊಠಡಿಗಳನ್ನು ಶೋಧನೆ ಮಾಡಲು ಹೋದ ಪೊಲೀಸರಿಗೆ ನೀವ್ಯಾರು ಅಂತ ಕೂಗಾಡಿದ್ದರು.
ಅಲ್ಲದೆ, ಆರೋಪಿ ನಂ. 4 ಬೆಳಗಾವಿಯ ಇಕ್ಬಾಲಖಾನ ತಂದೆ ಅಮೀರಖಾನ ಪಠಾಣ (42), ಮತ್ತು ಧಾರವಾಡದ 5 ನೇ ಆರೋಪಿತನಾದ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ (18) ಹಾಗೂ 10-15 ಜನ ಅಪರಿಚಿತ ಖೈದಿಗಳಿಗೆ ಕೂಗಿ ಕರೆದು, ಅವರಿಗೆ ಪ್ರೋತ್ಸಾಹಿಸಿ, ಪೊಲೀಸರ ಖಲಾಸ ಮಾಡಿರಿ, ಜೀವಸಹಿತ ಉಳಿಸಬೇಡರಿ ಎಂದು ಇತರ ಖೈದಿಗಳಿಗೆ ಪ್ರಚೋದನೆ ನೀಡಿದ್ದರು.
ಎಲ್ಲರೂ ಅಕ್ರಮ ಕೂಟವಾಗಿ ಸೇರಿಕೊಂಡು, ಜೈಲಿನ ಮುಖ್ಯ ದ್ವಾರದ ಸರ್ಚ ಗೇಟ ಹತ್ತಿರ ಆರೋಪಿ ನಂ.1 ಮತ್ತು 3 ಎಲ್ಲಿಯೂ ಹೋಗದಂತೆ ಹಿಡಿದುಕೊಂಡು ಅಕ್ರಮ ತಡೆಮಾಡಿ, ಆರೋಪಿ ನಂ.4 ಹಾಗೂ ಇತರ ಅಪರಿಚಿತ ಆರೋಪಿತರು ರಸ್ತೆ ಅಕ್ಕ-ಪಕ್ಕ ನೆಟ್ಟ ಇಟ್ಟಿಗೆಗಳನ್ನು ಕಿತ್ತುಕೊಂಡು, ಪೊಲೀಸ ಸಿಬ್ಬಂದಿ ಎಸ್.ಎಚ್ ದೊಟಿಕಲ ಅವರ ತಲೆಗೆ ಹಾಗೂ ಅಲ್ಲಲ್ಲಿ ಹೊಡೆದು, ಸಾದಾ ರಕ್ತಗಾಯ ಪಡಿಸಿದ್ದರು.
ಇದಲ್ಲದೇ ಆರೋಪಿ ನಂ. 2 ಮತ್ತು 5 ಸೇರಿಕೊಂಡು ಸಿಬ್ಬಂದಿ ಯು.ಆಯ್ ಕಾಡಮ್ಮನವರಿಗೆ ಬಿಡಬೇಡರಿ ಕೊಂದೇ ಬಿಡಿರಿ ಅಂತ ಧಮಕಿ ಹಾಕಿ, ಕೊಲೆ ಮಾಡುವ ಉದ್ದೇಶದಿಂದ ಇಟ್ಟಿಗೆಗಳಿಂದ ಮೈ ಕೈಗೆ ಹೊಡೆದಿದ್ದರು.
ಜೊತೆಗೆ ಇತರ 10-15 ಜನ ಅಪರಿಚಿತ ಖೈದಿಗಳೊಂದಿಗೆ ಸೇರಿಕೊಂಡು ಪೊಲೀಸ ಸಿಬ್ಬಂದಿ ಯು.ಆಯ್. ಕಾಡಮ್ಮನವರಿಗೆ ನೆಲದ ಮೇಲೆ ಬೀಳಿಸಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಎಡಗಡೆ ಭುಜದ ಹತ್ತಿರ ಎಲಬು ಮುರಿದು, ಭಾರಿ ಗಾಯಪಡಿಸಿದ್ದರು.
ಆ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ, ಹಲ್ಲೆ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಕಲಂ 143, 147, 148, 114, 323, 324, 307, 353, 341, 506 ಸಹ ಕಲಂ 149 ಐಪಿಸಿ.ನೇದರ ಅಡಿಯಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ ಮುರುಗೇಶ ಚನ್ನಣ್ಣವರ (ತನಿಖಾಧಿಕಾರಿ) ಹಾಗೂ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ (ಭಾಗಶಃ ತನಿಖಾಧಿಕಾರಿ) ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.