ಬೆಂಗಳೂರು prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭೇಟಿಗೆ ಅವಕಾಶ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 7 ಕ್ಕೆ ಮುಂದೂಡಿದೆ.
ಡಿ.ಕೆ. ಶಿವಕುಮಾರ ಅವರ ಪರ ವಕೀಲ ಮಂಜುನಾಥ ಎಂ.ಆರ್. ಅವರು ಇಮೇಲ್ ಮೂಲಕ ಸಲ್ಲಿಸಿದ್ದ ಈ ಅರ್ಜಿಯನ್ನು ಅವರಿಬ್ಬರ ಅನುಪಸ್ಥಿತಿಯಲ್ಲಿ
ವಿಚಾರಣೆ ನಡೆಸಿದ ನ್ಯಾಯಾಲಯವು ಮಾಜಿ ಸಚಿವ ವಿನಯ ಕುಲಕರ್ಣಿ ಯನ್ನು ಭೇಟಿಯಾಗಲು ಕಾನೂನು ತೊಡಕುಗಳೇನಾದರೂ ಇದೆಯಾ ಎಂಬುದರ ಕುರಿತು ಬೆಳಗಾವಿಯ ಹಿಂಡಲಗಾ ಜೈಲಿನ ಮುಖ್ಯ ಅಧೀಕ್ಷರಿಗೆ ವರದಿ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.
ಈ ಹಿಂದೆ ಡಿ.ಕೆ. ಶಿವಕುಮಾರ್ ಮಾಜಿ ಸಚಿವ ವಿನಯ ಕುಲಕರ್ಣಿ ಭೇಟಿಯಾಗಲು ಮುಂದೆ ಬಂದಾಗ ನ್ಯಾಯಾಲಯದ ಪರವಾನಿಗೆ ಪಡೆಯುವಂತೆ ವಿನಯ ಕೋರಿದ್ದರು.
ಹೀಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಜೈಲು ಅಧಿಕಾರಿಗಳ ವರದಿ ಬಳಿಕ
ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು
ಅನುಮತಿ ನೀಡುತ್ತಾ ಇಲ್ಲವೇ ಎಂಬುದನ್ನು ಜೂನ್ 7 ರಂದು ತಿಳಿಯಲಿದೆ.
ಉತ್ತರ ಕರ್ನಾಟಕ ಭಾಗದ ಜನತೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಚಿತ್ತ ಕೂಡ
ಈ ಅರ್ಜಿಯ ವಿಚಾರಣೆಯತ್ತ ನೆಟ್ಟಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.