ಹುಬ್ಬಳ್ಳಿ ಪ್ರಜಾಕಿರಣ.ಕಾಮ್ ಆ.28 : ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಕೆಲವರು ಹೋಗುತ್ತಾರೆ, ಇದು ದೌರ್ಭಾಗ್ಯ. ಯಾರು ಪಕ್ಷ ನಿಷ್ಠೆಯಿಂದ ಇರುತ್ತಾರೋ ಅಂತವರಿಗೆ ಬಿಜೆಪಿ ಅವಕಾಶ ಕೊಟ್ಟಿದೆ ಎಂದರು.
ನಾನು ಶಂಕರ ಪಾಟೀಲ್ ಮುನೇನಕೊಪ್ಪ ಜೊತೆ ಮಾತನಾಡಿದ್ದೇನೆ. ನನಗಿರೋ ಮಾಹಿತಿ ಪ್ರಕಾರ ಪಕ್ಷ ಬಿಟ್ಟು ಹೋಗಲ್ಲ ಎಂದರು.
ಇನ್ನು ಆಪರೇಶನ್ ಹಸ್ತದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಆಪರೇಶನ್ ಹಸ್ತಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನಿಸಬಹುದು, ಆದರೆ ವಿಚಾರಕ್ಕೆ ಬದ್ದರಾಗಿರೋ ಎಲ್ಲರೂ ನಮ್ಮ ಪಕ್ಷದಲ್ಲಿ ಇರ್ತಾರೆ ಎಂದರು.
“ನಮ್ಮ ಪಕ್ಷ ಪರಿವಾರವಾದಿ ಪಕ್ಷ ಅಲ್ಲ, ಕಳೆದ ಹತ್ತು ವರ್ಷದಿಂದ ಕಾಂಗ್ರೆಸ್ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ಪಡೆದಿಲ್ಲ.
ಇಂತಹ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಹೋಗಲ್ಲ..” ಅಂತ ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.