ಧಾರವಾಡ prajakiran.com : ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕ ಲೋಕದ ನಂಟು ಹೊಂದಿರುವ ಸದ್ಯ ಬಿಲ್ಡರ್ ಸುಬ್ವರಾಜು ಕೊಲೆ ಪ್ರಕರಣದಲ್ಲಿ ಮೈಸೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯೂಸುಫ್ ಬಚ್ಕಾನ್ ನನ್ನು ಧಾರವಾಡ ಪೊಲೀಸರು ನಾಲ್ಕು ದಿನಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.
ಯೂಸುಫ್ ಬಚ್ಕಾನ್ ನನ್ನು ಮೈಸೂರು ಜೈಲಿನಿಂದ ಬಾಡಿ ವಾರಂಟ್ ಮೇಲೆ ತಂದಿದ್ದ ಧಾರವಾಡದ ಉಪನಗರ ಠಾಣೆ ಪೊಲೀಸರು ವಿಶೇಷ ಭದ್ರತೆ ಮಧ್ಯೆ ಆತನನ್ನು ನಿನ್ನೆ ಸಂಜೆ
ಧಾರವಾಡದ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಯೂಸುಫ್ ಬಚ್ಕಾನ್ ನನ್ನು ನ್ಯಾಯಾಲಯ ಡಿ.31 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಈತ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಬ್ಬಳ್ಳಿ- ಧಾರವಾಡದ ಹಲವು ಉದ್ಯಮಿಗಳಿಗೆ, ಕೆಲ ರಾಜಕೀಯ ನಾಯಕರಿಗೆ ಹಾಗೂ ವಿಶೇಷವಾಗಿ ಬಿಲ್ಡರ್ ಗಳು ಮತ್ತು ಅಕ್ರಮವಾಗಿ ದೋ ನಂಬರ್ ದಂಧೆಯ ಮೂಲಕ
ಅಪಾರ ಹಣ ಮಾಡಿರುವ ಕುಳಗಳಿಗೆ ಹಪ್ತಾ ನೀಡದಿದ್ದರೆ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಗಿತ್ತು.
ಈ ಕುರಿತು ಕೆಲವರು ಮಾತ್ರ ಪೊಲೀಸರಿಗೆ ಮಾಹಿತಿ ನೀಡಿ, ದೂರು ನೀಡಿದ್ದರು.
ಆದರೆ ಇನ್ನೂ ಬಹಳಷ್ಟು ಜನ ಈ ಬಗ್ಗೆ ಬಹಿರಂಗವಾಗಿ ದೂರು ಕೊಡಲು ಮುಂದೆ ಬಂದಿರಲಿಲ್ಲ.
ಹೀಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸರು ಅನೇಕರಿಗೆ ರಕ್ಷಣೆ ನೀಡುವ ಭರವಸೆ ನೀಡಿದರೂ, ಬಚ್ಕಾನ್ ಉಸಾಬರಿ ಬೇಡ ಎಂದು ಪೊಲೀಸರಿಗೆ ಲಿಖಿತ ದೂರು ಕೊಡಲು ಮುಂದೆ ಬಂದಿಲ್ಲ ಎನ್ನಲಾಗಿದೆ.
ಹೀಗಾಗಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು
ವಿಚಾರಣೆ ನಡೆಸಿತ್ತು.
ಪೊಲೀಸರ ಎದುರು ಯುಸೂಫ್ ಬಚ್ಕಾನ್ ಹಣ ಕೇಳಿದ್ದಾಗಿ ಬಾಯಿ
ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ಈಗಾಗಲೇ ಆತನ ಅನೇಕ ಸಹಚರರಿಗೆ ಬಿಸಿ ತಾಕಿಸಿರುವ ಪೊಲೀಸರು ಕಾಲ್ ಲಿಸ್ಟ್ ಆಧಾರದ ಮೇಲೆ ಯೂಸುಫ್ ಬಚ್ಕಾನ್ ನನ್ನು ವಿಚಾರಣೆ ನಡೆಸಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತಿದೆ.
ಮುಂದೆ ಇದು ಯಾವ ತಿರುವು ಪಡೆಯುತ್ತದೆ. ಹುಬ್ಬಳ್ಳಿ ಧಾರವಾಡ ಪೊಲೀಸರು ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಕಾದು ನೋಡಬೇಕು.