ಧಾರವಾಡ prajakiran.com : ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಿದ್ದು ಸ್ವಾಗತಾರ್ಹ. ಇದರಿಂದ ಪಕ್ಷದಲ್ಲಿ ಯಾವುದೇ ಭಿನ್ನಮತ ಸ್ಪೋಟಗೊಳ್ಳುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಸಚಿವ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಉಮೇಶ ಕತ್ತಿ, ರಮೇಶ ಕತ್ತಿ, ಪ್ರಭಾಕರ ಕೋರೆ ಸೇರಿದಂತೆ ಕೆಲವರ ಹೆಸರು ಅಂತಿಮಗೊಳಿಸಿ ಕಳುಹಿಸಿದ್ದೆವು. ಆದರೆ, ಪಕ್ಷದ ವರಿಷ್ಠರು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದಾರೆ. ಇದಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ಹೇಳಿದರು.
ಅನೇಕ ವರ್ಷಗಳಿಂದ ತಳಮಟ್ಟದಿಂದ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಾಗಿ ದುಡಿದ ರಾಯಚೂರಿನ ಅಶೋಕ ಗಸ್ತಿ ಹಾಗೂ ಗೋಕಾಕ್ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿದ್ದು, ಇದರಿಂದ ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತ ಸ್ಪೋಟಗೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೂ ರಾಜ್ಯಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಉಮೇಶ ಕತ್ತಿ, ರಮೇಶ ಕತ್ತಿ ಹಾಗೂ ಪ್ರಭಾಕರ ಕೋರೆ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷವು ಸೂಕ್ತ ಸ್ಥಾನಮಾನ ನೀಡಲಿದೆ. ಈ ಕುರಿತಂತೆ ಪಕ್ಷದ ವರಿಷ್ಠರು ತಿರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಇನ್ನೂ ನೋಟಿಫಿಕೇಶನ್ ಹೊರಡಿಸಿಲ್ಲ. ಬೇರೆ-ಬೇರೆ ಜಿಲ್ಲೆಗಳಲ್ಲೂ ಆಕಾಂಕ್ಷಿಗಳಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ನನಗೆ ೩೦-೪೦ ಅರ್ಜಿಗಳು ಬಂದಿವೆ. ನೋಟಿಫಿಕೇಶನ್ ಹೊರಡಿಸಿದ ಮೇಲೆ ಈ ಬಗ್ಗೆ ವಿಚಾರ ಮಾಡುವುದಾಗಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ಯೋಜನೆ ನಾನು ಮುಖ್ಯಮಂತ್ರಿ ಇದ್ದಾಗ ಜಾರಿಗೆ ತಂದ ಯೋಜನೆ. ಆದರೆ, ಬೇರೆ ಸರ್ಕಾರದಿಂದ ಅನುಷ್ಠಾನಕ್ಕೆ ಬಂತು. ಈ ಯೋಜನೆ ವಿಫಲವಾಗಿಲ್ಲ. ಇದೊಂದು ಇದು ಉತ್ತಮ ಯೋಜನೆ ಎಂಬುದಕ್ಕೆ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸಾಕ್ಷಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.