ಬೆಳಗಾವಿ prajakiran.com : ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.
ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಹಲವು ನದಿಗಳು ಅಪಾಯ ಮಟ್ಟ ತಲುಪಿವೆ.
ಅದರಲ್ಲೂ, ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದ ಪ್ರದೇಶಗಳಲ್ಲಿ ಬೆಳಗಾವಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಈಗಾಗಲೇ ಕೃಷ್ಣಾನದಿಗೆ 70 ಸಾವಿರ ಕ್ಯೂಸೆಕ್ ಪ್ರಮಾಣದ ಒಳ ಹರಿವು ಹೆಚ್ಚಳವಾಗಿದೆ.
ಜೊತೆಗೆ ಯಡೂರು, ಕಲ್ಲೋಳ ಸೇತುವೆ ನೀರಿನಲ್ಲಿ ಮುಳುಗಿವೆ.
ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಇದರಿಂದಾಗಿ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲುಕಿನ 8 ಸೇತುವೆಗಳು ಜಲಾವೃತಗೊಂಡಿವೆ ಎನ್ನಲಾಗಿದೆ.
ಜತ್ರಾಟ-ಭೀವೆಶಿ, ಭೋಜ ಕಾರದಹಾ, ಅಕ್ಕೋಳ, ಸಿದ್ನಾಖ, ನಗನೂರು, ಗೋಟೂರು, ಮಮದಾಪುರ, ಬೋಜವಾಡಿ-ಕುನ್ನೂರ, ಮಲಿಕವಾಡ, ದತ್ತವಾಡ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ ಎಂದು ತಿಳಿದುಬಂದಿದೆ.
16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ಸೇತುವೆಗಳು ಜಲಾವೃತಗೊಂಡಿವೆ.
ಇದರಿಂದಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಟ್ಟೆಚ್ಚರ ಸೂಚಿಸಿದೆ.