ಬೆಂಗಳೂರು prajakiran.com :
ಹೈಕಮಾಂಡ್ ಬೇಡ ಅಂದರೆ ರಾಜೀನಾಮೆ ನೀಡಲು ಸಿದ್ಧ ಎಂದು ಎರಡು ತಿಂಗಳ ಹಿಂದೆ ಕೂಡ ಹೇಳಿದ್ದೇನೆ.
ಈಗಲೂ ಹೇಳುತ್ತಿದ್ದೇನೆ. ಜುಲೈ 25ರಂದು ವರಿಷ್ಠರಿಂದ ಸಂದೇಶ ಬರಬಹುದು. ಅವರ ಸೂಚನೆಗಾಗಿ ಕಾಯುತ್ತಿದ್ದೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜೀನಾಮೆ ಬಗ್ಗೆ ಈವರೆಗೆ ಹೈಕಮಾಂಡ್ ನಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ.
ಹಾಗಾಗಿ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ ಎಂದರು.
ಜುಲೈ 25ರ ಬಳಿಕ ಸಂದೇಶ ನೀಡುವ ಸಾಧ್ಯತೆ ಇದೆ. ವರಿಷ್ಠರು ನೀಡುವ ಸೂಚನೆಗೆ ನಾನು ಬದ್ಧ. ಅಧಿಕಾರ ಇರಲಿ ಇಲ್ಲದಿರಲಿ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏನು ಸಲಹೆ ನೀಡುತ್ತಾರೆ ಅವರ ಸೂಚನೆ ಪಾಲಿಸಲು ಸಿದ್ಧ ಎಂದರು
ಇದೇ ವೇಳೆ ಸಿಎಂ ಸ್ಥಾನಕ್ಕಾಗಿ ಯಾರ ಹೆಸರನ್ನೂ ನಾನು ಸೂಚಿಸಲ್ಲ. ನನ್ನ ಬಳಿ ಅಭಿಪ್ರಾಯ ಕೇಳಿದರೂ ನಾನು ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದರು.
ಹೈಕಮಾಂಡ್ ಸೂಚಿಸುವವರೆಗೂ ಸಿಎಂ ಆಗಿರುತ್ತೇನೆ ಎಂದು ಹೇಳಿದರು.
ಸಚಿವ ಸಂಪುಟದ ಸಭೆಯಲ್ಲಿ ಸಿಎಂ ಬಹಳಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ ಎಂದು ಅಂದುಕೊಂಡಿದ್ದರು.
ಆದರೆ ಸಿಎಂ ಕೊನೆಯವರೆಗೂ ಮೌನಕ್ಕೆ ಶರಣಾಗಿದ್ದರು. ಬಹಳಷ್ಟು ಸಚಿವರ ನಿರೀಕ್ಷೆ ಹುಸಿಯಾಗಿದೆ.