ಧಾರವಾಡ prajakiran.com : ಧಾರವಾಡ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದ ಬಿಟ್ಟು ಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು ನಗರ ಹಾಗೂ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದೆ.
ಜಿಲ್ಲೆಯಾದ್ಯಂತ ಮಳೆಯ ಪರಿಣಾಮ ಮಲೆನಾಡು, ಕರಾವಳಿಯ ವಾತಾವರಣ ಕಂಡು ಬಂದಿದೆ.
ಇಡೀ ದಿನ ಶೀತ ಹವೆ ಜನರನ್ನು ಕಾಡುತಿದ್ದು ಸೂರ್ಯನ ಬೆಳಕು ಕಾಣತಾನೇ ಇಲ್ಲದಂತಾಗಿದೆ.
ಸತತವಾಗಿ 6 ದಿನಗಳಿಂದ ತುಂತುರು ಮಳೆ ಆಗುತ್ತಿದೆ. ಸುಮಾರು ಐದು ಗಂಟೆಗೂ ಅಧಿಕ ಕಾಲ ಬಿಟ್ಟು ಬಿಡದೇ ಸುರಿಯುತ್ತಿರುವ ದೃಶ್ಯ ನಗರದಲ್ಲಿ ಕಂಡುಬಂದಿದೆ.
ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡುತ್ತಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಮಳೆಯ ಅಬ್ಬರ ಮಧ್ಯೆ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕಿದರು.
ವಿದ್ಯಾರ್ಥಿಗಳ ಜೊತೆಗೆ, ಪೋಷಕರು ಕೂಡ ಕೊಡೆ ಹಿಡಿದುಕೊಂಡು ಪರಿಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆ ತಂದ ದೃಶ್ಯ ಕಂಡುಬಂತು.