ಧಾರವಾಡ prajakiran.com : ರಾಜ್ಯದಲ್ಲಿ ಲಾಕ್ಡೌನ್ನಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದೀಗ ರಾಜ್ಯದ ೧೦ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಳಕ್ಕೆ ಒತ್ತು ನೀಡಿದೆ.
ಇದಕ್ಕಾಗಿ ಮುಖ್ಯಮಂತ್ರಿ ಬಳಿಗೆ ಪ್ರತಿ ಪಾಲಿಕೆಗೆ ರೂ.೧೫೦ ಕೋಟಿಯಂತೆ ಒಟ್ಟು ರೂ.೧೫೦೦ ಕೋಟಿ ಬೇಡಿಕೆ ಇಡುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸ್ಮಾಟ್ಮ ಸಿಟಿ, ಸಿಡಿಪಿ, ಯುಜಿಡಿ, ಬಿಆರ್ಟಿಎಸ್ ಸೇರಿ ಇತ್ಯಾದಿ ಕಾಮಗಾರಿಗಳ ಸಾಧಕ ಬಾಧಕಗಳ ಪ್ರಗತಿ ಪರಿಶೀಲಿಸಿ, ಬೇಗ ಮುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾಗಿ ಹೇಳಿದರು.
ಹುಬ್ಬಳ್ಳಿ ನಗರಕ್ಕೆ ರೂ.೧೨೦೦ ಕೋಟಿ ವೆಚ್ಚದಲ್ಲಿ ೨೪*೭ ಕುಡಿಯುವ ನೀರು ಯೋಜನೆ ಸಿದ್ಧಗೊಂಡಿದ್ದು, ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿ ಆರಂಭಕ್ಕೂ ಸೂಚಿಸಿದೆ ಎಂದ ಅವರು, ಬೆಂಗಳೂರಿಗೆ ಮಾದರಿಯಂತೆಯೇ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೈಗೊಂಡ ಸ್ಮಾಟ್ಮ ಸಿಟಿಗೆ ರೂ.೧೦೦೦ ಕೋಟಿ, ಯುಜಿಡಿಗೆ ರೂ.೩೦೦ ಕೋಟಿ ನೀಡಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆಂಬ ಎಚ್ಚರಿಕೆ ನೀಡಿದರು.
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಕೇವಲ ಊಹಾಪೋಹ. ಕ್ಯಾಂಟಿನ್ ಹೇಗೆ ನಿರ್ವಹಣೆ ಮಾಡಬೇಕೆಂಬ ಬಗ್ಗೆ ಈಗಾಗಲೇ ಚರ್ಚಿಸಿದೆ ಎಂದ ಸಚಿವ ಭೈರತಿ ಬಸವರಾಜ, ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ೩ ವರ್ಷಕ್ಕೊಮ್ಮೆ ಕಡ್ಡಾಯ. ಈ ಹಣವನ್ನು ನಗರದ ಮೂಲಭೂತ ಸೌಕರ್ಯಗಳಿಗೆ ಬಳಸಲಾಗುವುದು ಎಂದು ತಿಳಿಸಿದರು.