ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಹಾಗೂ ಡಿಸಿಪಿ ಪಿ. ಕೃಷ್ಣಕಾಂತ ನಡುವೆ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.
ಡಿಸಿಪಿ ಪಿ. ಕೃಷ್ಣಕಾಂತಅವರು ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರಿಗೆ ಬರೆದ ಪತ್ರ ಪೊಲೀಸ್ ಇಲಾಖೆಯ ಬಹುತೇಕರ ಕೈಗೆ ತಲುಪಿದೆ.
ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದಲ್ಲಿಯೇ ಕಚೇರಿ ಇದ್ದರೂ ಪರಸ್ಪರ ಭೇಟಿಯಾಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಡಿಸಿಪಿ ಹೇಳಿಕೊಂಡಿದ್ದಾರೆ. ಆ ಪತ್ರದ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.
ಆದರೆ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಡಿಸಿಪಿ ಪಿ. ಕೃಷ್ಣಕಾಂತ ಅವರಿಗೆ ತರಲು ಹೇಳಿದ ಹಲವು ಪ್ರಕರಣಗಳ ಪೊಲೀಸ್ ಡೇರಿ, ವೀಡಿಯೋ ದಾಖಲೆ, ಸಮಗ್ರ ಮಾಹಿತಿ ಅವರು ಮುಂದಿಟ್ಟಿಲ್ಲ ಎನ್ನಲಾಗಿದೆ.
ಈ ಬಗ್ಗೆ ಅವರನ್ನು ಪ್ರಜಾಕಿರಣ.ಕಾಮ್ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಅರಿತ ಕೆಲ ಪೊಲೀಸರು ಆಡಿದ್ದೇ ಆಟ ಎಂಬಂತಾಗಿದೆ. ಕೆಲ ಪೊಲೀಸರು ಪ್ರಕರಣಗಳ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರ ಮಾಹಿತಿ ಅರಿತು ಪೊಲೀಸ ಆಯುಕ್ತರು ಗರಂ ಆಗಿದ್ದಕ್ಕೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದು ಪೊಲೀಸ್ ಕಾನ್ಸಟೇಬಲ್ ನಿಂದ ಹಿಡಿದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ವರೆಗೆ ಪ್ರತಿಯೊಬ್ಬರಿಗೂ ಗೊತ್ತಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಆದರೆ ಈ ಬಗ್ಗೆ ಯಾರೊಬ್ಬರು ಮೌನ ಮುರಿಯುತ್ತಿಲ್ಲ. ಇದನ್ನು ಅವರಿಬ್ಬರು ಐಪಿಎಸ್ ಅಧಿಕಾರಿಗಳು ವೈಯಕ್ತಿಕವಾಗಿ ತೆಗೆದುಕೊಂಡಿದ್ದರಿಂದ ದೀರ್ಘಕ್ಕೆ ಹೋಗಿ ನಿಂತಿದೆ.
ಅಚ್ಚರಿ ಹಾಗೂ ದುರಂತದ ಸಂಗತಿಯೆಂದರೆ ಇಷ್ಟೊಂದು ಸಂಬಂಧ ಹದಗೆಡಲು ಕಾರಣವೇನು ಎಂಬುದು ಅರಿತುಕೊಳ್ಳುವುದರಲ್ಲಿ ಯಡವಿರುವುದು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋವುಂಟು ಮಾಡಿದೆ.
ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಮರೆತು ಈ ರೀತಿ ನಡೆದುಕೊಳ್ಳುತ್ತಿರುವುದು ಪೊಲೀಸರಿಗೆ ಹಾಗೂ ಹುಬ್ಬಳ್ಳಿ ಧಾರವಾಡದ ಪ್ರಜ್ಞಾವಂತ ನಾಗರಿಕರಿಗೆ ಬೇಸರ ಮೂಡಿಸಿದೆ.
ಇದಕ್ಕೆ ಐತಿಶ್ರೀ ಹಾಡದಿದ್ದರೆ ಕೆಲ ಪ್ರಕರಣಗಳು ದಿಕ್ಕು ತಪ್ಪುವ ಸಾಧ್ಯತೆಗಳಿದ್ದು, ಅಮಾಯಕರು ಬಲಿಯಾಗುವುದನ್ನು ಅಲ್ಲಗೆಳೆಯುವಂತಿಲ್ಲ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅದಕ್ಕೆ ಮುಕ್ತಿ ಹಾಡುವುದಾಗಿ ಹೇಳಿದ್ದಾರೆ. ಆದರೆ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕಿದೆ.