ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಮನಕಾರಿ ಆಡಳಿತ ನಡೆಸುತ್ತಿದ್ದು, ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದೆ.
ಹೀಗಾಗಿ, ನಮ್ಮ ಗುರಿ ಪ್ರಲ್ಹಾದ ಜೋಶಿ ಅವರನ್ನು ಸೋಲಿಸುವುದು ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ.
ಹೀಗಾಗಿ ಅವರ ಬದಲಾವಣೆಗೆ ಹುಬ್ಬಳ್ಳಿಯ ಮಠಾಧೀಶರ ಚಿಂತನ-ಮಂಥನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ಇದೀಗ ಜೋಶಿ ಬದಲಾವಣೆಗೆ ಕೊಟ್ಟ ಗಡುವು ಮುಗಿದಿದೆ. ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಲ್ಹಾದ ಜೋಶಿ ಬದಲಾವಣೆಗೆ ಪಟ್ಟು ಹಿಡಿದ ಬಳಿಕ ಬಹುಸಂಖ್ಯಾತ ನಾಯಕರು ತಮಗೆ ದೂರವಾಣಿ, ಪ್ರತ್ಯೇಕವಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಅದಕ್ಕೆ ಜಗದಿದ್ದಾಗ ನನಗೆ ಬೆದರಿಕೆ ಕರೆಗಳು ಸಹ ಬಂದಿವೆ. ನಮ್ಮ ಮಾನ, ಪ್ರಾಣ ಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಆದರೆ ಕೇಂದ್ರ ಸಚಿವರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಲು ನಮ್ಮ ಪ್ರಾಣ, ಮಾನ ಹೋದರೂ ಸರಿ ನಮ್ಮ ನಿಲುವು ಬದಲಾವಣೆ ಆಗದು. ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದಿದ್ದಾರೆ.
ಮುಂದಿನ ನಿರ್ಧಾರವನ್ನು ಚರ್ಚಿಸಲು ಏ. 2 ರಂದು ಧಾರವಾಡದಲ್ಲಿ ಭಕ್ತರ ಸಭೆಯನ್ನು ಕರೆಯಲಾಗಿದೆ.
ಅಂದು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಮ್ಮ ನಡೆ ನಿಲ್ಲಲಿದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.