ಬೆಡ್ ಸಿಗದೆ ರೋಗಿಗಳ ಪರದಾಟ
ಖಾಸಗಿ ಆಸ್ಪತ್ರೆಯತ್ತ ಬೊಟ್ಟು ತೋರುವ ಸಿಬ್ಬಂದಿ
ಹುಬ್ಭಳ್ಳಿ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರ ನಿಯಂತ್ರಣ ಕಷ್ಟ ಸಾಧ್ಯ ಎನ್ನುವಷ್ಟರ ಮಟ್ಟಿಗೆ ಅದು ಬಂದು ನಿಂತಿದೆ.
ಈ ನಡುವೆ ಕರೋನಾ ಸೋಂಕು ಹೊರತಾಗಿ ಇತರರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಾಗಿಲು ತಟ್ಟಿದರೆ ಸಾಕು ಸಿದ್ದ ಉತ್ತರ ಬರುತ್ತಿದೆ.
ನಮ್ಮಲ್ಲಿ ಬೆಡ್ ಗಳಿಲ್ಲ. ವೆಂಟಿಲೇಟರ್ ಗಳಿಲ್ಲ. ಆ ಆಸ್ಪತ್ರೆಗಳಿಗೆ ಹೋಗಿ ಎಂದು ಅಲ್ಲಿಯ ಸಿಬ್ಬಂದಿ ಖಾಸಗಿ ಆಸ್ಪತ್ರೆಗಳತ್ತ ಬೊಟ್ಟು ಮಾಡುತ್ತಿದ್ದಾರೆ.
ಅದರಲ್ಲೂ ಕೆಲವರ ಶಿಫಾರಸ್ಸು, ಮಾಧ್ಯಮದವರ ಪ್ರವೇಶದಿಂದ ಬೆಡ್ ಗಿಟ್ಟಿಸಿಕೊಂಡರೂ ವೆಂಟಿಲೇಟರ್ ಇಲ್ಲ.
ಹೆಚ್ಚು ಕಡಿಮೆಯಾದರೆ ನಾವು ಹೊಣೆಯಲ್ಲ ಎಂದು ಬರೆದುಕೊಡಿ ಎಂದು ಗಂಟು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿ ಕಿಮ್ಸ್ ಬಡವರ ಪಾಲಿನ ಸಂಜೀವಿನಿಯಾಗಿದ್ದು, ಉಚಿತ ಚಿಕಿತ್ಸೆ ಸಿಗುವುದು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಗುಣಮುಖರಾಗಿ ಮರಳುವ ವಿಶ್ವಾಸರ್ಹತೆ ಹೊಂದಿರುವುದರಿಂದ ಜನತೆ ಅದರ ದುಂಬಾಲು ಬೀಳುತ್ತಿದ್ದಾರೆ. ಆದ್ರೆ ಅಲ್ಲಿಯಅವ್ಯವಸ್ಥೆ ಕೆಲವರಿಗೆ ಶಾಪವಾಗಿ ಪರಿಣಮಿಸುತ್ತಿದೆ.
ಕಿಮ್ಸ್ ನಲ್ಲಿ ಬೆಡ್ ಪಡೆಯಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಶಿಫಾರಸ್ಸು ಬೇಕೆಂಬ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ.
ಜನ ಸಾಮಾನ್ಯರಿಗೆ ಉಚಿತ ಚಿಕಿತ್ಸೆ ಜೊತೆಗೆ ವಿಶ್ವಾಸದ ಮಾತುಗಳು ಬೇಕಾಗಿರುವ ಈ ದಯನೀಯ ಪರಿಸ್ಥಿತಿಯಲ್ಲಿ ಅಲ್ಲಿಯ ವೈದ್ಯಕೀಯ ಸಿಬ್ಬಂದಿ ಮಾನವೀಯ ನೆಲೆಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಲಿ ಎಂಬುದು ನಮ್ಮ ಪ್ರಜಾಕಿರಣ.ಕಾಮ್ ಆಶಯವಾಗಿದೆ.