ಧಾರವಾಡ prajakiran.com : ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ 12ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆಯನ್ನು ದಾರಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರೆಸ್ಸಸ್ ಭೂತ ಇನ್ನೂ ಬಿಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ.
ಸನಾತನ ಧರ್ಮದ ತತ್ವ ಸಿದ್ದಾಂತಗಳ ವಿರುದ್ಧ ಬಸವಣ್ಣನವರ ವಿಚಾರ ಧಾರೆಗಳಿವೆ. ಅವುಗಳು ಈ ಅನುಭವ ಮಂಟಪದ ಮುಖಾಂತರ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ.
ಆದರೆ, ಬಿಜೆಪಿ ಸರಕಾರ
ಅದೇ ಅನುಭವ ಮಂಟಪವನ್ನು ಮೂಲ ಸನಾತನ ವಿಚಾರ ಧಾರೆ ಎಂದು ಬಿಂಬಿಸಿದ್ದು ಬಸವಾದಿ ಶರಣರ ಕ್ರಾಂತಿಗೆ ಕಪ್ಪು ಚುಕ್ಕೆಯಾದಂತಾಗಿದೆ.
ಇದು ರಾಜ್ಯ ಸರಕಾರದಿಂದ ವಿಶ್ವಗುರು ಬಸವಣ್ಣನವರಿಗೆ ಮಾಡಿದ ಅವಮಾನ ಕೂಡ ಆಗಿದೆ ಎಂದು ಆರೋಪಿಸಿದರು.
ನಿಜವಾಗಿಯೂ ಅನುಭವ ಮಂಟಪ ನಿರ್ಮಾಣ ಹೇಗೆ ಮಾಡಬೇಕು ಎನ್ನುವ ವಿಚಾರವನ್ನು ಈ ಹಿಂದೆಯೇ ಸಿದ್ದರಾಮಯ್ಯ ಸರಕಾರದಿಂದ ಮಾಡಲಾಗಿತ್ತು.
ಅದಕ್ಕಾಗಿ ಗೋ.ರು. ಚ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಅಲ್ಲದೇ ಸರಕಾರ ವಿಧಾನ ಸಭೆಯಲ್ಲಿ ಕಟ್ಟಡಕ್ಕೆ 650 ಕೋಟಿಗೆ ಅನುಮತಿ ನೀಡಿತ್ತು,
ಆದರೆ ಇಂದು ಯಡಿಯೂರಪ್ಪ ಸರಕಾರ ಸ್ವಲ್ಪ ಹಣ ಒದಗಿಸಿ ಯೋಜನೆಯನ್ನು ಹೈಜಾಕ್ ಮಾಡುತ್ತಿದೆ ಎಂದು ದೂರಿದರು.
ಇದರಿಂದಾಗಿ 12ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆಯನ್ನು ದಾರಿ ತಪ್ಪಿಸಿದಂತೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ಬಸವ ಅಭಿಮಾನಿಗಳು ಇದನ್ನು ವಿರೋಧಿಸಿ ಬಸವಣ್ಣನವರ ಸಿದ್ಧಾಂತ ಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಳ್ಳಬೇಕು ಎಂದು ನೀರಲಕೇರಿ ಮನವಿ ಮಾಡಿದ್ದಾರೆ.