ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ
ವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಧಾರವಾಡ ಹೈಕೋರ್ಟ್
ಮುಂದೂಡಿದೆ.
ಧಾರವಾಡದ ಹೈಕೋರ್ಟ್ ಎಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ನಟರಾಜ್ ಅವರು ಈ ಮಹತ್ವದ ಆದೇಶ ಹೊರಡಿಸಿದರು.
ಧಾರವಾಡ ಹೈಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಇಂದು
ತಕರಾರು ಅರ್ಜಿಯನ್ನು ಸಲ್ಲಿಸಬೇಕಿತ್ತು.
ಆದರೆ, ಸಿಬಿಐ ಪರ ವಕೀಲರು ಮತ್ತಷ್ಟು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಸಿಬಿಐ ಪರ ಹಿರಿಯ ವಕೀಲರು ವೀಡಿಯೋ ಕಾನ್ಪರೆನ್ಸ್ ಮೂಲಕ ಹೈಕೋರ್ಟ್
ಹಾಜರಾಗಿ ಮನವಿ ಮಾಡಿಕೊಂಡರು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ಮುಂದಿನ ಬುಧವಾರಕ್ಕೆ ವಿಚಾರಣೆಯನ್ನು
ಮುಂದೂಡಿದೆ.
ಈಗಾಗಲೇ ಸಿಬಿಐ ಅಧಿಕಾರಿಗಳು ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ನ್ಯಾಯಾಲಯಕ್ಕೆ ಎರಡು ಬಾರಿ ಸಮಯಾವಕಾಶ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿ ಎರಡು ತಿಂಗಳು ಗತಿಸಿದ್ದರೆ, ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅಲಿಯಾಸ್ ಚಂದೂ ಮಾಮ ಧಾರವಾಡ ಕೇಂದ್ರ ಕಾರಾಗೃಹ ಸೇರಿದ್ದು, ಈ ಪ್ರಕರಣದಲ್ಲಿ ಮತ್ತಾರನ್ನು ಸಿಬಿಐ ವಿಚಾರಣೆ ನಡೆಸಿ ಕಂಬಿ ಹಿಂದೆ ಕಳುಹಿಸಲು ತಯಾರಿ ನಡೆಸಿದೆ ಎಂಬುದನ್ನು ಕಾದು ನೋಡಬೇಕು.