ಉತ್ತರ ಕರ್ನಾಟಕದ ಜನರ ಪಾಲಿಗೆ ಜೀವ ಉಳಿಸುವ,ರಕ್ಷಿಸುವ ಸಂಜೀವಿನಿ
ಹುಬ್ಬಳ್ಳಿ : ಕೋವಿಡ್ ಸೋಂಕಿತರಿಗೆ ಧಾರವಾಡ ಜಿಲ್ಲೆಯ ಅಸ್ಪತ್ರೆಗಳಲ್ಲಿ ವಿಶೇಷವಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಲಭ್ಯವಾಗುತ್ತಿರುವ ಚಿಕಿತ್ಸೆ, ಊಟ,ಉಪಚಾರದ ಕ್ರಮಗಳ ಬಗ್ಗೆ ಸೋಂಕಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಜನರ ಪಾಲಿಗೆ ಜೀವ ಉಳಿಸುವ,ರಕ್ಷಿಸುವ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಕಿಮ್ಸ್) ಕೋವಿಡ್ ಕಾಣಿಸಿಕೊಂಡ ನಂತರ ಕಳೆದ ಮಾರ್ಚ್ ತಿಂಗಳಿನಿಂದಲೂ ಚಿಕಿತ್ಸೆಗೆ ಸತತವಾಗಿ ಶ್ರಮಿಸುತ್ತಿದೆ. ತಜ್ಞ ವೈದ್ಯರು, ವೈದ್ಯಕೀಯ ಸೌಲಭ್ಯಗಳು , ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯ ಪರಿಣತಿ ಉಳಿದ ಆಸ್ಪತ್ರೆಗಳಿಗೂ ಮಾದರಿಯಾಗಿದೆ.
ಪಿಎಂಎಸ್ ಎಸ್ ವೈ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸುಸಜ್ಜಿತ ಕಟ್ಟಡದಲ್ಲಿ ರೋಗಿಗಳ ಆರೈಕೆಯ ಬಗ್ಗೆ ಚಿಕಿತ್ಸೆ ಪಡೆದು ಗುಣಮುಖರಾದವರು , ಕೊವಿಡ್ ವಾರಿಯರ್ ಗಳ ಕರ್ತವ್ಯ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ನಿಂದ ಗುಣಮುಖರಾದ ಹುಬ್ಬಳ್ಳಿಯ ಕೇಶ್ವಾಪುರದ ಸೈಯದ್ ಸಮೀವುಲ್ಲಾ ಪಾಷಾ ಮಾತನಾಡಿ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ತಮಗೆ ಕಿಮ್ಸ್ ನಲ್ಲಿ ತುರ್ತು ಚಿಕಿತ್ಸಾ ವಾರ್ಡನಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು.
ಸ್ವಚ್ಚತೆ, ನೈರ್ಮಲ್ಯ ಕಾಲಕಾಲಕ್ಕೆ ಉತ್ತಮ ಪೌಷ್ಟಿಕಾಂಶವುಳ್ಳ ಊಟ,ಉಪಹಾರ,ಸೂಪ್ ನೀಡಿ ಆರೈಕೆ ಮಾಡುತ್ತಿದ್ದಾರೆ.ವೈದ್ಯರು ,ಸಿಬ್ಬಂದಿಯ ಶ್ರಮಕ್ಕೆ ಕೃತಜ್ಞನಾಗಿದ್ದೇನೆ ಎಂದು ತೃಪ್ತಿ ವ್ಯಕ್ತಪಡಿಸುತ್ತಾರೆ.